ರಷ್ಯಾ ಹಾಗೂ ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಬೇಕು ಎಂಬ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಹೇಳಿಕೆಯನ್ನು ಭದ್ರತಾ ಮಂಡಳಿಯು ಸರ್ವಾನುಮತದಿಂದ ಅಂಗೀಕರಿಸಿದೆ.
ಅವರ ಪ್ರಯತ್ನಗಳಿಗೆ ಮಂಡಳಿಯು ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದೆ.
ನಿನ್ನೆ ಶುಕ್ರವಾರದ ನಡೆದ ಕಿರು ಸಭೆಯಲ್ಲಿ ಅಂಗೀಕರಿಸಿದ ಹೇಳಿಕೆಯಲ್ಲಿ, ಉಕ್ರೇನ್ನಲ್ಲಿ ನಡೆಯುತ್ತಿರುವ ಆಕ್ರಮಣವನ್ನು ಯುದ್ಧ , ಸಂಘರ್ಷ ಅಥವಾ ಆಕ್ರಮಣ ಎಂದು ಉಲ್ಲೇಖಿಸಿಲ್ಲ. ಏಕೆಂದರೆ, ಮಂಡಳಿಯ ಹಲವು ಸದಸ್ಯರು ರಷ್ಯಾವು ಉಲ್ಲೇಖಿಸಿದಂತೆ ಉಕ್ರೇನ್ ಮೇಲಿನ ದಾಳಿಯನ್ನು ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂದು ಕರೆಯುತ್ತಿದ್ದಾರೆ.
ಆದರೆ, ಭದ್ರತಾ ಮಂಡಳಿಯಲ್ಲಿ ವಿಟೊ ಅಧಿಕಾರವನ್ನು ಹೊಂದಿರುವ ರಷ್ಯಾ, ಈ ಹಿಂದಿನ ಹೇಳಿಕೆ ಅಥವಾ ನಿರ್ಣಯಗಳನ್ನು ನಿರ್ಬಂಧಿಸಿದ ರೀತಿಯೇ ಇದನ್ನೂ ನಿರ್ಬಂಧಿಸುವ ಸಾಧ್ಯತೆ ಇದೆ.
ಉಕ್ರೇನ್ನಲ್ಲಿ ಶಾಂತಿ ಮತ್ತು ಭದ್ರತೆಯ ನಿರ್ವಹಣೆಯ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಲಾಗಿದೆ. ಎಲ್ಲಾ ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಅಡಿಯಲ್ಲಿ, ತಮ್ಮ ಅಂತರರಾಷ್ಟ್ರೀಯ ವಿವಾದಗಳನ್ನು ಶಾಂತಿಯುತ ವಿಧಾನಗಳಿಂದ ಪರಿಹರಿಸುವುದಾಗಿ ಒಪ್ಪಿಗೆ ಸೂಚಿಸಿರುವುದನ್ನು ಪುನರುಚ್ಚರಿಸಲಾಯಿತು.
ಮಾಸ್ಕೋ ಮತ್ತು ಕೀವ್ಗೆ ಇತ್ತೀಚಿಗೆ ಭೇಟಿ ನೀಡಿದ್ದ ಗುಟೆರೆಸ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ನಾಗರಿಕರನ್ನು ಸ್ಥಳಾಂತರಿಸಲು ಅನುವುಮಾಡಿಕೊಡುವ ಕುರಿತಂತೆ ಮನವೊಲಿಸಿದ್ದರು. ಅದರಂತೆ, ಆಗ್ನೇಯ ಬಂದರು ನಗರವಾದ ಮರಿಯುಪೋಲ್ ಮತ್ತು ಅಜೋವ್ ಸ್ಟಾಲ್ ಉಕ್ಕಿನ ಘಟಕದಿಂದ ಜನರನ್ನು ಸ್ಥಳಾಂತರಿಸಲಾಗಿದೆ.