ಧರ್ಮರಕ್ಷಣೆಯ ಬಗ್ಗೆ ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹೇಳಿದರು.
ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಧರ್ಮ ಅವನತಿಯಲ್ಲಿ ಸಾಗುತ್ತಿರುವಾಗ ಜ್ಞಾನದ ಮೂಲಕ ಧರ್ಮ ರಕ್ಷಣೆಗೆ ನಿಂತ ಮಹಾನೀಯರು ಶ್ರೀ ಶಂಕರಾಚಾರ್ಯರ ಅವರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಮಹಾನ್ ನಾಯಕರುಗಳ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಿದರು.
ಸಮಾಜದ ಮುಖಂಡರಾದ ಅಧ್ಯಕ್ಷ ಡಾ.ಬಿ.ಟಿ ಅಚ್ಚುತ್ ಕುಮಾರ್ ಮಾತನಾಡಿ, ಆದಿ ಶಂಕರಾಚಾರ್ಯರ ದಿನಾಚರಣೆಯನ್ನು ಜಿಲ್ಲಾಡಳಿತದಿಂದ ಆಚರಿಸುತ್ತಿರುವುದರಿಂದ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಶಂಕರಾಚಾರ್ಯರ ವಿಚಾರಧಾರೆಗಳನ್ನು ಎಲ್ಲರೂ ತಿಳಿಯಬೇಕು. ಈ ನಿಟ್ಟಿನಲ್ಲಿ ನಾವು ಶಂಕರ ಜಯಂತಿ ಹಾಗೂ ದಸರಾ ಹಬ್ಬದ ಸಮಯದಲ್ಲಿ 9 ದಿನಗಳ ಕಾಲ ಅವರ ಕುರಿತು ಉಪನ್ಯಾಸವನ್ನು ನೀಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.
ಸಮಾಜದ ಎಂ.ಎಸ್ ವಿನಾಯಕ್ ಉಪನ್ಯಾಸ ನೀಡಿ, ಶಂಕರಾಚಾರ್ಯರನ್ನು ಇಡೀ ವಿಶ್ವವೇ ಆರಾಧಿಸುತ್ತಿದೆ. ಮನುಷ್ಯರ ಜೀವನದಲ್ಲಿ ಗುರು ಮುಖ್ಯ, ಗುರು ಇಲ್ಲದೆ ಏನು ನಡೆಯಯಲಾಗದು. ನಾವೆಲ್ಲರೂ ಭಗವಂತನ ಸ್ಮರಣೆ ಮಾಡಬೇಕು, ಶಂಕರಾಚಾರ್ಯರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿ ಎಲ್ಲರೂ ಸಹ ಅವರ ಚಿಂತನೆಗಳನ್ನು ಪರಿಪಾಲಿಸಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಳಿನಿ ಮತ್ತು ತಂಡದಿಂದ ಶಂಕರಾಚಾರ್ಯರ ಕೀರ್ತನೆಗಳನ್ನು ಹಾಡಿದರು.
ಇದೇ ವೇಳೇ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಮಿತ್ ಬಿದರಿ, ಸಮಾಜದ ಪಿ.ಸಿ ಶ್ರೀನಿವಾಸ್, ಗಿರೀಶ್ ನಾಡಿಗ್, ಹೆಚ್.ಕೆ ವೆಂಕಟೇಶ್, ಸುಬ್ಬಣ್ಣ, ಡಾ.ಶಶಿಕಾಂತ್, ಶ್ರೀ ರಾಮ್, ರಾಘವೇಂದ್ರ, ಪಿ.ಸಿ ರಾಮನಾಥ್, ಶಂಕರ ಭಕ್ತರು ಹಾಗೂ ಮಹಿಳೆಯರು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.