ಅತೃಪ್ತಿ, ಅಸಮಾನತೆ, ಅಶಾಂತಿ, ಅರಾಜಕತೆ ಎಲ್ಲವಕ್ಕೂ ಭಯ, ಶೋಕ, ಮೋಹಗಳೇ ಕಾರಣವಾಗಿದ್ದು ಇದರ ನಿವಾರಣೆಗೆ ಅನಾದಿಕಾಲದಿಂದಲೂ ಎಷ್ಟೇ ಚಿಂತನೆಗಳಿದ್ದರೂ ತಿಳಿಗನ್ನಡದಲ್ಲಿ ಸರಳವಾಗಿ ಪರಿಹಾರ ಹೇಳಿದವರು ಬಸವಾದಿ ಶರಣರು ಎಂದು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ ಅಭಿಪ್ರಾಯಪಟ್ಟರು.
ಅವರು ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಲೇಖಕಿಯರ ಸಂಘ ಇವರ ಸಹಯೋಗದಲ್ಲಿ ಏರ್ಪಾಡಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬಸವಣ್ಣನವರ ವೈಚಾರಿಕತೆ ಹಾಗೂ ಮಾನವೀಯತೆ’ ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.
ಬಸವಣ್ಣನವರು ‘ಆತ್ಮೋದ್ಧಾರ’ ಅಂದರೆ ಮನೋವಿಕಾರಗಳನ್ನು ದೂರಮಾಡಿಕೊಂಡು ಪರಿಶುದ್ಧ ಆತ್ಮ ನಾಗುವುದು, ಸಮ ಸಮಾಜ’ ಅಂದರೆ ಜಾತಿ, ಮತ, ಲಿಂಗ, ವರ್ಗ ಭೇದ ರಹಿತವಾಗಿ ಬಾಳುವುದು, ‘ಕಾಯಕ’ ಎಂದರೆ ಪ್ರಾಮಾಣಿಕತೆಯಿಂದ ದುಡಿಯುವುದು, ‘ದಾಸೋಹ’ ಎಂದರೆ ದುಡಿದದ್ದನ್ನು ಹಂಚಿ ತಿನ್ನುವುದು ಇವುಗಳ ಪ್ರಾಮಾಣಿಕ ಪಾಲನೆಯಿಂದ ಜಗತ್ತು ಭಯ ಶೋಕ ಮೋಹಾದಿಗಳಿಂದ ಮುಕ್ತವಾಗಬಹುದು ಎಂಬುದು ಬಸವಣ್ಣನವರ ಅಭಿಪ್ರಾಯವಾಗಿತ್ತು ಎಂದರು.
ಅನ್ಯ ಭಿನ್ನ ವಿಲ್ಲದ ಜ್ಞಾನ ಮಾರ್ಗವೇ ಬಸವಣ್ಣನವರ ತತ್ವವಾಗಿದ್ದು ‘ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ’, ಕಣ್ಣಿಗೆ ದೃಶ್ಯದಿಂದ, ಮೂಗಿಗೆ ವಾಸನೆಯಿಂದ, ಬಾಯಿಗೆ ರುಚಿಯಿಂದ, ಕಿವಿಗೆ ಶಬ್ದದಿಂದ ತ್ವಚೆಗೆ ಸ್ಪರ್ಶದಿಂದ ತೃಪ್ತಿ ಸಿಕ್ಕರೆ, ಬುದ್ಧಿಗೆ ಭಾವ, ಭಾವಕ್ಕೆ ವಿಚಾರ ಕೊಟ್ಟು ತೃಪ್ತಿ ಪಡಿಸಬಹುದು ಆದರೆ ‘ಅರಿವಿನ ತೃಪ್ತಿಗೆ ಅನುಭಾವವೇ ಆಶ್ರಯ’ ಎಂದು ಬಸವಣ್ಣನವರು ಪ್ರತಿಪಾದಿಸಿದ್ದು ಅವರ ವಚನಗಳ ಅಧ್ಯಯನ ಮತ್ತು ಅನುಷ್ಠಾನದಿಂದ ಇದನ್ನು ಸಾಧಿಸಬಹುದು ಎಂದು ಉದಾಹರಣೆಗಳ ಸಹಿತ ಮಂಜುನಾಥ್ ಅವರು ವಿವರಿಸಿದರು.
ದಾವಣಗೆರೆ ಜಿಲ್ಲಾ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ವೀಣಾ ಕೃಷ್ಣಮೂರ್ತಿಯವರ ನಿವಾಸದಲ್ಲಿ ಏರ್ಪಾಡಾಗಿದ್ದ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಕೆ.ಎನ್. ಸ್ವಾಮಿ ನೆರವೇರಿಸಿದರು.
ಪ್ರಾಸ್ತಾವಿಕ ನುಡಿಗಳನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಪ್ರಸ್ತುತಪಡಿಸಿದರು.
ವಿರಕ್ತಮಠದ ಬಸವಪ್ರಭು ಸ್ವಾಮಿಗಳ ಸಾನ್ನಿಧ್ಯದಲ್ಲಿ ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷೆ ಶ್ರೀಮತಿ ಸುಮತಿ ಜಯಪ್ಪ, ಮಾಜಿ ಮೇಯರ್ ಅಜಯ್ ಕುಮಾರ್, ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪರಮೇಶ್ವರಪ್ಪ, ಕ. ಸಾ.ಪ.ದ ದಿಳ್ಯಪ್ಪ,ಮಲ್ಲಮ್ಮ, ಅವರಗೆರೆ ರುದ್ರಮುನಿ ಮುಂತಾದವರ ಉಪಸ್ಥಿತರಿದ್ದರು.
ದಾಗಿನಕಟ್ಟೆ ಪರಮೇಶ್ವರಪ್ಪ, ಜಗದೀಶ್ ಕೂಲಂಬಿ ಕಾರ್ಯಕ್ರಮ ನಿರೂಪಿಸಿದರು. ಉಮಾದೇವಿ ವಚನ ಹಾಡಿದರು, ಕೋಟೆ ಹಾಳು ಬಸಮ್ಮ ಹಂಪೋಳ್ ಶಿವಪ್ಪ,ಹೆಚ್.ಎಸ್. ಬಸವರಾಜ್, ಶಕುಂತಲಾ ಶಂಭುಲಿಂಗಪ್ಪ ಬಸಪ್ಪ ನೆಸ್ವಿ, ಸಂಗನಬಸವ ನೆಸ್ವಿ, ಕತ್ತಲಗೆರೆ ಮಲ್ಲಮ್ಮ ಗೌಡರ ಜಯದೇವಪ್ಪ ಹಾಗೂ ಸುಧಾ ಮತ್ತು ಜೆ.ಬಿ. ರಾಜ್ ಇವರುಗಳ ದತ್ತಿ ಗಳಿಂದ ಕಾರ್ಯಕ್ರಮ ಏರ್ಪಾಡಾಗಿತ್ತು.