ಇಂದಿನ ದಿನಮಾನಗಳಲ್ಲಿ ದೇಶದೆಲ್ಲೆಡೆ ಸಾಕಷ್ಟು ಕೋಮು ಸಂಬಂಧಿತ ಜಟಾಪಟಿಗಳು ನಡೆಯುತ್ತಿವೆ.
ಸಮಾಜದಲ್ಲಿ ಹಿಂದಿನಿಂದ ನೆಲೆಯೂರಿ ಬರುತ್ತಿದ್ದ ಶಾಂತಿ-ನೆಮ್ಮದಿಗಳಿಗೆ ಮತ್ತೆ ಸವಾಲು ಹಾಕುತ್ತಿರುವಂತಹ ಪರಿಸ್ಥಿತಿ ಮೂಡುತ್ತಿರುವುದು ದುರದೃಷ್ಟಕರ.
ಧಾರ್ಮಿಕ ಸೌಹಾರ್ದತೆಯ ಪರಂಪರೆಯುಳ್ಳ ನಮ್ಮ ದೇಶದಲ್ಲಿ ಮತ್ತೆ ಆ ಭಾವನೆ ಗಟ್ಟಿಯಾಗಿ ಎಲ್ಲರಲ್ಲೂ ಒಡಮೂಡಬೇಕಿದೆ. ಅಂತಹ ಸಾಮರಸ್ಯ ಭಾವನೆ ಮೂಡುವಂತೆ ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆ ಎಲ್ಲರಿಗೂ ಮಾದರಿಯಾಗಲಿ.
ಉತ್ತರ ಪ್ರದೇಶ ನಿವಾಸಿ ಪೂಜಾ ಎಂಬಾಕೆಯ ವಿವಾಹವು ಏಪ್ರಿಲ್ 22ರಂದು ನಿಶ್ಚಯವಾಗಿತ್ತು. ಆದರೆ, ಆಕೆಯ ಮದುವೆಯ ಸಮಯ ಹತ್ತಿರ ಬರುತ್ತಿದ್ದಂತೆ ಪೂಜಾಳ ಸಂಬಂಧಿಕರು ಆಕೆಯ ಮದುವೆಗಾಗಿ ಕಲ್ಯಾಣ ಮಂಟಪವೊಂದನ್ನು ಬುಕ್ ಮಾಡಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆರ್ಥಿಕವಾಗಿ ಅವರ ಬಳಿ ಸಾಕಷ್ಟು ಹಣವಿರದ ಕಾರಣ ಅವರಿಗೆ ಕಲ್ಯಾಣ ಮಂಟಪ ಬುಕ್ ಮಾಡಲು ಆಗಿಲ್ಲ.
ಕೊನೆಗೆ ಪೂಜಾ ಅವರ ಅಂಕಲ್ ರಾಜೇಶ್ ಚೌರಾಸಿಯಾ ಎಂಬುವವರು ಪೂಜಾ ಮನೆಯ ಪಕ್ಕದಲ್ಲಿ ವಾಸವಿದ್ದ ಮುಸ್ಲಿಂ ಕುಟುಂಬದವರನ್ನು ಭೇಟಿ ಮಾಡಿ ಅವರಿಂದ ತಮಗೇನಾದರೂ ಸಹಾಯವಾಗಬಲ್ಲದೇ ಎಂದು ವಿನಂತಿಸಿದಾಗ ರಮ್ಜಾನಿನ ಈ ಪವಿತ್ರ ಮಾಸದಲ್ಲಿ ನಿಜಕ್ಕೂ ಆ ಮುಸ್ಲಿಂ ಕುಟುಂಬ ಒಂದು ಪವಿತ್ರ ಕೆಲಸ ಮಾಡಿ ಸಮಾಜದಲ್ಲಿ ಐಕ್ಯತೆಯ ಸಂದೇಶ ರವಾನಿಸಿದೆ.
ಪೂಜಾಳ ಮದುವೆ ದಿಬ್ಬಣಕ್ಕಾಗಿ ಹಾಗೂ ಅತಿಥಿಗಳ ಉಪಚಾರಕ್ಕಾಗಿ ಆ ಮುಸ್ಲಿಂ ಕುಟುಂಬ ತಮ್ಮ ಮನೆಯನ್ನು ಆತಿಥ್ಯಕ್ಕೆಂದು ನೀಡಿ ಪೂಜಾಳ ಮದುವೆ ಮೆರವಣಿಗೆಯಲ್ಲಿ ಆ ಕುಟುಂಬವೂ ಭಾಗಿಯಾಗಿದೆ. ಪೂಜಾ ತಂದೆ ಕೋವಿಡ್ ಮೊದಲನೆ ಅಲೆಯಲ್ಲಿ ಸೋಂಕಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರಿಂದ ಆಕೆಯ ಅಂಕಲ್ ಹಾಗೂ ಉಳಿದ ಕುಟುಂಬದ ಮಹಿಳೆಯರು ಪೂಜಾರ ಮದುವೆಯ ಜವಾಬ್ದಾರಿ ಹೊತ್ತಿತ್ತೆಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೂಜಾ ಅಂಕಲ್ ಚೌರಾಸಿಯಾ”ನಮಗೆ ಮಂಟಪ ಸಿಗುವುದು ಕಷ್ಟವಾದಾಗ ನಾನು ನಮ್ಮ ನೆರೆಯಲ್ಲಿ ವಾಸವಿದ್ದ ಪರ್ವೇಜ್ ಅವರ ಬಳಿ ಬಂದು ಸಹಾಯ ಕೇಳಿದೆ. ತಕ್ಷಣ ಅವರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಮನೆಯ ಅಂಗಳವನ್ನೇ ಮಂಟಪವನ್ನಾಗಿ ಬಳಸಲು ಅನುಮತಿ ನೀಡಿದ್ದಲ್ಲದೆ, ಪರ್ವೇಜ್ ಅವರ ಕುಟುಂಬವೇ ಅಲ್ಲಿ ಮಂಟಪವನ್ನೂ ಸಹ ನಿರ್ಮಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರ್ವೇಜ್ ಅವರ ಪತ್ನಿಯಾದ ನಾದಿರಾ ಅವರು ಮಾತನಾಡಿ, ನಮಗೆ ಪೂಜಾ ಮದುವೆ ವಿಷಯ ಗೊತ್ತಾದ ಬಳಿಕ ನಮ್ಮ ಕೈಲಾದಷ್ಟು ಅವರಿಗೆ ಸಹಾಯ ಮಾಡಬೇಕೆಂದುಕೊಂಡಿದ್ದೆವು ಹಾಗೂ ಪೂಜಾ ಸಹ ನಮಗೆ ಮಗಳ ರೀತಿಯಲ್ಲೇ ಇರುವುದರಿಂದ ಈ ಪವಿತ್ರ ರಮ್ಜಾನ್ ಮಾಸದಲ್ಲಿ ಆಕೆಯ ಈ ಶುಭ ವಿವಾಹ ಕಾರ್ಯಕ್ಕೆ ನೆರವಾದ ಸಂಗತಿಗಿಂತ ಯಾವುದೂ ದೊಡ್ಡದಲ್ಲ ಎಂದು ನುಡಿದಿದ್ದಾರೆ.
ಅವರ ಕುಟುಂಬದ ಪುರುಷ ಸದಸ್ಯರು ಮದುವೆಗೆ ಬಂದ ಅತಿಥಿಗಳನ್ನು ಉಪಚರಿಸುತ್ತ ಕೂರುವ ವ್ಯವಸ್ಥೆ ಮಾಡಿದರೆ ಹೆಣ್ಣು ಸದಸ್ಯರು ಮದುವೆಯ ಗೀತೆಗಳನ್ನು ಹಾಡುವಲ್ಲಿ ನಿರತರಾಗಿದ್ದರು. ಅವರ ಈ ಸಹಾಯದಿಂದಾಗಿ ನಮಗೆ ಮದುವೆಗೆ ಸಂಬಂಧಿಸಿದ ಇತರೆ ಕಾರ್ಯಗಳನ್ನು ನಿರಾಯಾಸವಾಗಿ ನಿರ್ವಹಿಸಲು ಸಾಕಷ್ಟು ಅನುಕೂಲವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ರಾಜೇಶ್ ಚೌರಾಸಿಯಾ ಅವರ ಪ್ರಕಾರ, ಪರ್ವೇಜ್ ಅವರ ಕುಟುಂಬವು ತಮ್ಮ ಮನೆಯ ಪ್ರಾಂಗಣವನ್ನು ಮಂಟಪಕ್ಕಾಗಿ ಸಿದ್ಧಪಡಿಸಿತು. ಆನಂತರ ಅಲ್ಲಿ ಬರುವ ಅತಿಥಿಗಳನ್ನು ಸತ್ಕರಿಸಲು ಸಕಲ ವ್ಯವಸ್ಥೆಗಳನ್ನು ಮಾಡಿದರಲ್ಲದೆ, ಬಂದ ಅತಿಥಿಗಳಿಗೆ ಕಾಣಿಕೆಗಳನ್ನೂ ಸಹ ನೀಡಲಾಯಿತು. ಈ ಎಲ್ಲ ಕಾರ್ಯವನ್ನು ಪರ್ವೇಜ್ ಅವರ ಕುಟುಂಬ ತುಂಬಾ ಅನ್ಯೋನ್ಯವಾಗಿ ನೋಡಿಕೊಂಡಿದೆ ಎಂದು ತಿಳಿಸಿದರು.
ಅಲ್ಲದೆ, ಈ ಸಂದರ್ಭದಲ್ಲಿ ಪರ್ವೇಜ್ ಅವರ ಕುಟುಂಬ ಪೂಜಾಗೆ ಬಂಗಾರದ ನೆಕ್ಲೇಸ್ ಒಂದನ್ನು ಉಡುಗೊರೆಯಾಗಿ ನೀಡಿ, ಆಶಿರ್ವದಿಸಿದ್ದಾರೆ ಎಂದು ತಿಳಿದುಬಂದಿದೆ.