ಕೊರೋನಾ ಸವಾಲು ಇನ್ನೂ ಮುಗಿದಿಲ್ಲ. ಶಾಲೆ ಆರಂಭದ ಸಮಯದಲ್ಲಿ ಕೊರೋನಾ 4ನೇ ಅಲೆಯ ಭೀತಿ ಇದೆ.
ಓಮಿಕ್ರಾನ್ ಉಪತಳಿ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಆರಂಭಿಕ ಹಂತದಲ್ಲೇ ಸೋಂಕು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ದೇಶದ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು. ಅಷ್ಟೇ ಅಲ್ಲ ದೇಶದಲ್ಲಿರುವ ಬಿಜೆಪಿಯೇತರ ರಾಜ್ಯಗಳಲ್ಲಿ ಪೆಟ್ರೋಲ್, ಡಿಸೇಲ್ ದರ ಕಡಿಮೆ ಮಾಡಿ ಎಂದು ಮನವಿ ನೀಡಿದ್ದಾರೆ.
ದೇಶದಲ್ಲಿ ಕೊರೋನಾ 4ನೇ ಅಲೆ ಆತಂಕ ಹಿನ್ನೆಲೆ ಬುಧವಾರ ಬೆಳಗ್ಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಪ್ರಧಾನಿ, ನಂತರ ಮಾತನಾಡಿದರು. ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಎಲ್ಲರಿಗೂ ಕೊರೋನಾ 2 ಲಸಿಕೆ ನೀಡಲಾಗಿದೆ. ಬೂಸ್ಟರ್ ಡೋಸ್ ನೀಡಲಾಗುತ್ತಿದೆ. 6-12 ವರ್ಷದ ಮಕ್ಕಳಿಗೂ ಕೊರೋನಾ ಸಲಿಕೆ ಹಾಕಲು ಅನುಮತಿ ಸಿಕ್ಕಿದೆ. ಎಲ್ಲ ಮಕ್ಕಳಿಗೂ ಆದಷ್ಟು ಬೇಗ ಲಸಿಕೆ ವಿತರಣೆ ಮಾಡಲಾಗುತ್ತದೆ. ಈಗಾಗಲೇ ಹಲವು ಶಾಲೆಗಳು ಆರಂಭವಾಗಿವೆ. ಇಂತಹ ಸಂದರ್ಭದಲ್ಲಿ ಕೊರೋನಾ 4ನೇ ಅಲೆ ಪೋಷಕರಲ್ಲಿ ಸಹಜವಾಗಿ ಆತಂಕ ಹುಟ್ಟಿಸಿದೆ. ಕೊರೋನಾದಿಂದ ಬಚಾವ್ ಆಗಲು ಲಸಿಕೆ ಅತ್ಯಗತ್ಯ. ದೇಶದ ಅಭಿವೃದ್ಧಿ ಜೊತೆಗೆ ಕೊರೋನಾ ಸೋಂಕು ನಿಯಂತ್ರಿಸುವ ಕೆಲಸದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರತವಾಗಿವೆ. ಸಾರ್ವಜನಿಕರ ಹಿತದೃಷ್ಟಿಯ ನಿಟ್ಟಿನಲ್ಲಿ ಕಾರ್ಯ ಭರದಿಂದ ಸಾಗಿದೆ ಎಂದರು.
ಕೊರೋನಾ ಸಂದರ್ಭದಲ್ಲಿ ಜನರಿಗೆ ಹೊರೆಯಾಗುತ್ತೆ. ಗುವಾಹಟಿಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 103 ರೂ. ಇದೆ. ಆದರೆ ಮುಂಬೈನಲ್ಲಿ 120 ರೂಪಾಯಿ ಇದೆ. ಎಲ್ಲೆಲ್ಲಿ ಬೆಲೆ ಹೆಚ್ಚಳ ಇದೆಯೋ ಸುಂಕ ಕಡಿಮೆ ಮಾಡಿ ಎಂದು ಮನವಿ ಮಾಡಿದ ಪ್ರಧಾನಿ ಅವರು, ಕೊರೋನಾ ಸಂಕಷ್ಟ ಕಾಲದಲ್ಲಿ ಜನರಿಗೆ ಹೊರೆ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಹಿಂದೆ ಸುಂಕ ಕಡಿಮೆ ಮಾಡುವಂತೆ ಕೇಂದ್ರದಿಂದ ಸೂಚನೆ ನೀಡಲಾಗಿತ್ತು. ಆದರೆ, ಬಿಜೆಪಿಯೇತರ ಕೆಲ ರಾಜ್ಯಗಳಲ್ಲಿ ಇಳಿಕೆ ಮಾಡಿಲ್ಲ. ಕರ್ನಾಟಕ ಮತ್ತು ಗುಜರಾತ್ನಲ್ಲಿ ಕಳೆದ ನವೆಂಬರ್ನಲ್ಲಿ ಇಳಿಕೆ ಮಾಡಲಾಗಿತ್ತು. ಈ ವಿಚಾರದಲ್ಲಿ ಎರಡೂ ರಾಜ್ಯಗಳು ಮಾದರಿ ಎಂದು ಪ್ರಧಾನಿ ಹೇಳಿದರು.