ಕೊರೋನಾ 4 ನೇ ಅಲೆಯ ಭಯ ಇಡೀ ದೇಶದಲ್ಲಿ ಆರಂಭಗೊಂಡಿದೆ. ಈ ವಿಷಯದ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೆಲವು ನಿರ್ದೇಶನಗಳನ್ನು ಸೂಚಿಸಿದ್ದಾರೆ.
ಪ್ರಧಾನ ಮಂತ್ರಿಗಳೊಂದಿಗೆ ನಡೆಸಿದ ಸಭೆಯ ನಂತರ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದರು.
ರಾಜ್ಯದಲ್ಲಿ ಸ್ಥಿತಿ ಹೇಗಿದೆ ಹಾಗೂ ಯಾವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಅಂತ ಪ್ರಧಾನಿಗಳಿಗೆ ವಿವರಣೆ ನೀಡಲಾಗಿದೆ. ಎಂದು ಹೇಳಿದರು.
6ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ನೀಡುವುದನ್ನು ಶಾಲೆಗಳಲ್ಲೇ ಒಂದು ಅಭಿಯಾನದ ರೂಪದಲ್ಲಿ ಆರಂಭಿಸಲು ಅವರು ಸೂಚಿಸಿದ್ದಾರೆ ಎಂದು ಹೇಳಿದರು.
ಎಲ್ಲಾ ಹಂತಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಜನರು ಪಾಲಿಸುವಂತೆ ನಿಗಾವಹಿಸಬೇಕು. 15-18 ಪ್ರಾಯದ ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲು ಪ್ರಧಾನಿ ತಿಳಿಸಿದ್ದಾರೆ ಎಂದು ಬೊಮ್ಮಾಯಿ ಅವರು ಹೇಳಿದರು.
ಟೆಸ್ಟ್, ಟ್ರ್ಯಾಕ್, ಟ್ರೇಸ್ ಮತ್ತು ಟೀಕಾ-ನಾಲ್ಕು-ಟಿ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಧರಿಸದೆ ಓಡಾಡಬಾರದು.ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರಬೇಕು.ಈ ನಿಯಮಗಳನ್ನು ಜಾರಿಗೊಳಿಸಿ ಅವುಗಳ ಪಾಲನೆ ಕುರಿತು ಎಚ್ಚರವಹಿಸಬೇಕು. ಕೊರೋನಾ ಸೋಂಕಿತರಿಗಾಗಿ ಆಸ್ಪತ್ರೆಗಳನ್ನು ಸಿದ್ಧಗೊಳಿಸಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಬೆಂಕಿ ನಂದಿಸುವ ಉಪಕರಣ ಇರುವುದನ್ನು ಖಾತ್ರಿಪಡಿಸಿಕೊಳ್ಳಲು ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಲಸಿಕಾಕರಣ ಅಭಿಯಾನ ಬಹಳ ಬಿರುಸಾಗಿ ನಡೆದ ಕಾರಣ 3ನೇ ಅಲೆಯಲ್ಲಿ ತೊಂದರೆಯಾಗಲಿಲ್ಲ. ಆದ್ದರಿಂದ, ಇನ್ನೂ ಲಸಿಕೆಯ 2 ಡೋಸ್ ತೆಗೆದುಕೊಳ್ಳದವರಿದ್ದರೆ ಅವರ ಮನವೊಲಿಸಿ ಕೊಡಿಸಬೇಕು. ಅರ್ಹರಿಗೆ ಬೂಸ್ಟರ್ ಡೋಸ್ ನೀಡುವ ಕೆಲಸ ಎಡಬಿಡದೆ ಸಾಗಬೇಕು ಅಂತ ಪ್ರಧಾನಿ ಹೇಳಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಜನರು ಅನಾವಶ್ಯಕವಾಗಿ ಅತಂಕ, ಗಾಬರಿಗೊಳಗಾಗದಂತೆ ನೋಡಿಕೊಳ್ಳಬೇಕು. ಸದ್ಯಕ್ಕೆ ಯಾವುದೇ ನಿರ್ಬಂಧ ಬೇಡ ಅಂತ ಪ್ರಧಾನಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.