ರಾಜ್ಯದಲ್ಲಿ ರಾಜಕೀಯವಾಗಿ ತಲ್ಲಣ ಮೂಡಿಸುತ್ತಿದ್ದ ರೈತರ ಆತ್ಮಹತ್ಯೆ ಪ್ರಕರಣಗಳ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಇಳಿಕೆಮುಖವಾಗುತ್ತಿವೆ.
ಒಂದು ಕಾಲ ಘಟ್ಟದಲ್ಲಿ ಸಮೂಹ ಸನ್ನಿ ರೀತಿ ರೈತರು ನೇಣಿಗೆ ಶರಣಾಗುತ್ತಿದ್ದುದು ಸರ್ಕಾರಗಳಿಗೆ ಬಹು ದೊಡ್ಡ ತಲೆನೋವಾಗಿತ್ತು. ಆದರೆ, ಇತ್ತೀಚಿಗಿನ ವರ್ಷಗಳಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಕಡಿಮೆಯಾಗುತ್ತಿವೆ ಎಂದು ತಿಳಿದುಬಂದಿದೆ.
ರೈತರ ಆತ್ಮಹತ್ಯೆಗಳು ರಾಜಕೀಯ ಗುದ್ದಾಟದ ಕೇಂದ್ರ ಬಿಂದುವಾಗಿವೆ. ಕರ್ನಾಟಕ ರಾಜ್ಯ ಇಂಥ ರಾಜಕೀಯ ಕಂಪನಕ್ಕೆ ಸಾಕ್ಷಿಯಾಗಿದೆ.
ಎಸ್.ಎಂ.ಕೃಷ್ಣ ಅಧಿಕಾರವಧಿಯಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆ ಸರಣಿ ಸರ್ಕಾರವನ್ನೇ ಅಲುಗಾಡಿಸಿತ್ತು. ಸಾಲು ಸಾಲು ಬರದ ಹಿನ್ನೆಲೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿದ್ದವು. ಪ್ರತಿ ದಿನ ರೈತರ ಆತ್ಮಹತ್ಯೆ ಪ್ರಕರಣ ಬಗ್ಗೆ ಎಸ್.ಎಂ.ಕೃಷ್ಣ ವಿರುದ್ಧ ಪ್ರತಿಪಕ್ಷಗಳು ಮುಗಿ ಬಿದ್ದಿದ್ದವು. ಬಳಿಕ ರೈತರ ಹಾಗೂ ಗ್ರಾಮೀಣ ಭಾಗದ ಜನರ ಆಕ್ರೋಶಕ್ಕೆ ತುತ್ತಾಗಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನವಾಣೆಯಲ್ಲಿ ಸೋತು ಅಧಿಕಾರ ಕಳೆದುಕೊಳ್ಳಬೇಕಾಯಿತು. 1998ರಿಂದ 2006ರವರೆಗೆ ರಾಜ್ಯದಲ್ಲಿ ಸುಮಾರು 19,000 ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗಿವೆ. ಇದರಲ್ಲಿ ವೈಯ್ಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಸೇರಿವೆ ಎಂದು ಹೇಳಲಾಗಿದೆ.
ಉತ್ತಮ ಮಳೆ-ಬೆಳೆ, ಸಾಲಮನ್ನದಿಂದಾಗಿ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅನ್ನದಾತನ ಆತ್ಮಹತ್ಯೆ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಅದರಲ್ಲೂ ಕಳೆದ ನಾಲ್ಕು ವರ್ಷಗಳಲ್ಲಿ ನೇಗಿಲಯೋಗಿಯ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗುತ್ತಿರುವುದು ಸರ್ಕಾರವೂ ಸೇರಿ ನಾವೆಲ್ಲರೂ ನಿಟ್ಟುಸಿರು ಬಿಡುವ ವಿಚಾರವಾಗಿದೆ. ಆವತ್ತು ರಾಜಕೀಯವಾಗಿ ಬಿರುಗಾಳಿ ಎಬ್ಬಿಸುತ್ತಿದ್ದ ರೈತರ ಆತ್ಮಹತ್ಯೆ ಪ್ರಕರಣಗಳು ಸದ್ಯ ಇಳಿಮುಖವಾಗಿವೆ.
2018-19ರಲ್ಲಿ ಆರ್ಥಿಕ ಸಂಕಷ್ಟಕ್ಕೆ ರೈತರ ಆತ್ಮಹತ್ಯೆ ಪ್ರಕರಣ 867 ದಾಖಲಾಗಿದ್ದರೆ, 2019- 20ರಲ್ಲಿ 884 ಹಾಗೂ 2020-21ರಲ್ಲಿ 637 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಅಂಕಿ-ಅಂಶ ಪರಿಹಾರಕ್ಕಾಗಿ ಸರ್ಕಾರ ಪರಿಗಣಿಸಿದ ಅರ್ಹ ಆತ್ಮಹತ್ಯೆ ಪ್ರಕರಣವಾಗಿವೆ. ರೈತರ ಆತ್ಮಹತ್ಯೆ ಇಳಿಮುಖವಾಗುತ್ತಿರುವುದರಿಂದ ಇತ್ತೀಚಿನ ಕೆಲ ವರ್ಷಗಳಿಂದ ಅದು ರಾಜಕೀಯ ಹೊಯ್ದಾಟದ ವಿಚಾರವಾಗಿ ಮುನ್ನಲೆಗೆ ಬರುತ್ತಿಲ್ಲ.
ಇದಕ್ಕೆ ಪ್ರಮುಖ ಕಾರಣ ಉತ್ತಮ ಮುಂಗಾರು, ಹಿಂಗಾರು. ಕಳೆದ ನಾಲ್ಕು ವರ್ಷಗಳಲ್ಲಿ ಬರಗಾಲ ಕಣ್ಮರೆಯಾಗಿದ್ದು, ಉತ್ತಮ ಮಳೆ, ಬೆಳೆಯಾಗುತ್ತಿದೆ. ಇದರ ಜೊತೆಗೆ ಸರ್ಕಾರದಿಂದ ರೈತರ ಸಾಲಮನ್ನಾವೂ ದೊಡ್ಡ ಕೊಡುಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ, ಜಗದೀಶ್ ಶೆಟ್ಟರ್ ಸರ್ಕಾರ, ಕುಮಾರಸ್ವಾಮಿಯವರ ಮೈತ್ರಿ ಸರ್ಕಾರದಲ್ಲಿನ ಸಾಲ ಮನ್ನಾ ಯೋಜನೆ ರೈತರ ನೆರವಿಗೆ ಬಂದಿದೆ. ಇನ್ನು ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಪರ ಯೋಜನೆಗಳಿಂದ ಆತ್ಮಹತ್ಯೆ ಪ್ರಕರಣ ಇಳಿಮುಖವಾಗುತ್ತಿವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ರೈತ ಮುಖಂಡರು ಈ ವಾದವನ್ನು ಅಲ್ಲಗಳೆದಿದ್ದಾರೆ. ಸಾಲಮನ್ನಾದಿಂದ ರೈತರ ಆತ್ಮಹತ್ಯೆ ಕಡಿಮೆಯಾಗಿಲ್ಲ. ಕೋವಿಡ್ನಿಂದ ರೈತರು ಮಾನಸಿಕವಾಗಿ ಕುಗ್ಗಿದ್ದಾರೆ. ಅವರ ಸಮಸ್ಯೆ ಉಲ್ಬಣವಾಗಿದೆ. ಸರ್ಕಾರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಲು ಕ್ರಮವಹಿಸಬೇಕು. ಆಗ ರೈತರಿಗೆ ಅನುಕೂಲವಾಗಲಿದೆ. ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ಇಳಿಮುಖವಾಗಿವೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯ ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ಇಳಿಮುಖವಾಗಿವೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯ ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.