ಹುಬ್ಬಳ್ಳಿ ಗಲಭೆಯಲ್ಲಿ ಕಾಂಗ್ರೆಸ್ನವರ ಕೈವಾಡವಿದೆ ಎಂದು ಬಿಜೆಪಿ ನಾಯಕರು ಆಪಾದಿಸುತ್ತಿದ್ದಾರೆ. ಅವರದ್ದೇ ಸರ್ಕಾರವಿದ್ದು, ಕ್ರಮಕೈಗೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.
ಹುಬ್ಬಳ್ಳಿ ಗಲಭೆಯಲ್ಲಿ ತಪ್ಪು ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಕಾಂಗ್ರೆಸ್ ಮಧ್ಯ ಪ್ರವೇಶ ಮಾಡುವುದಿಲ್ಲ. ಆದರೆ, ಅಮಾಯಕರ ವಿರುದ್ಧ ಕ್ರಮ ಆಗಬಾರದು. ಪೊಲೀಸರು ಹೆಚ್ಚಿನ ಅನಾಹುತ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೈತಿಕ ಪೊಲೀಸ್ಗಿರಿ ವಿಚಾರದಲ್ಲಿ ಅವರು ಕಠಿಣ ಪದ ಪ್ರಯೋಗ ಮಾಡಿದ್ದರೆ, ಪೊಲೀಸರಿಗೆ ಹೆಚ್ಚಿನ ಶಕ್ತಿ ಬರುತ್ತಿತ್ತು ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಲಾಭೂರಾಮ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ನಿರತರನ್ನು ಸಮಾಧಾನಗೊಳಿಸಲು ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಯತ್ನಿಸಿದ್ದಾರೆ.
ಈಗ ಅವರನ್ನೇ ಆರೋಪಿಯನ್ನಾಗಿಸಲಾಗುತ್ತಿದೆ. ತಪ್ಪು ಮಾಡಿದ್ದರೆ ಬಂಧಿಸಲಿ ಎಂದರು.
ಮಾಧ್ಯಮದಲ್ಲಿ ಬರುತ್ತಿರುವುದಕ್ಕೂ, ವಾಸ್ತವಕ್ಕೂ ದೂರ ಇದೆ. ಮಾಧ್ಯಮದವರನ್ನು ಹುಬ್ಬಳ್ಳಿಯನ್ನು ಕೊಲ್ಲುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಕಾನೂನು ಕೈಗೆತ್ತಿಕೊಳ್ಳುವುದನ್ನು ಖಂಡಿಸುತ್ತೇನೆ. ರಾಜ್ಯ ಶಾಂತಿಯ ತೋಟ ಆಗಬೇಕು. ಯಾವುದೇ ಧರ್ಮದವರು ಅಶಾಂತಿ, ಪ್ರಚೋದನೆಗೆ ಅವಕಾಶ ಕೊಡಬಾರದು ಎಂದರು.
ಹುಬ್ಬಳ್ಳಿ ವಾಣಿಜ್ಯ ನಗರವಾಗಿದೆ. ವ್ಯಾಪಾರ ನಡೆಯುವಂತಾಗಬೇಕು. ಕಾನೂನು ಕೈಗೆತ್ತಿಕೊಳ್ಳಬೇಡಿ. ಸರ್ಕಾರ, ಪೊಲೀಸರಿಗೆ ಬಿಡಿ. ಸಮಸ್ಯೆ ಇದ್ದರೆ ಹೇಳಿ, ಕಾಂಗ್ರೆಸ್ ಹೋರಾಟ ಮಾಡಲಿದೆ. ದೇಶದೆಲ್ಲೆಡೆ ಕೋಮುಗಲಭೆ ಹುಟ್ಟುಹಾಕುವ ವ್ಯವಸ್ಥಿತ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ದೇಶ ಉಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದು ಹೇಳಿದರು.