ರಾಜ್ಯ ಸರ್ಕಾರವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತ ನೌಕರರನ್ನು ಗುರುತಿಸಿ, ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲು ಉದ್ದೇಶಿಸಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 10ಜನ ಹಾಗೂ ಕಳೆದ ಸಾಲಿನಲ್ಲಿನ 10 ಜನ ಪ್ರತಿಭಾವಂತ ನೌಕರರನ್ನು ಗುರುತಿಸಲಾಗಿದ್ದು ಒಟ್ಟು 20 ಜನ ನೌಕರರನ್ನು ಏಪ್ರಿಲ್ 21 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಪತ್ರ, ಸ್ಮರಣಿಕೆ ಹಾಗೂ 10,000 ರೂ.ಗಳ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.
ಅವರು ಇಂದು ಸರ್ಕಾರಿ ನೌಕರರ ದಿನಾಚರಣೆ ಕುರಿತು ಕೆ ಲೈವ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಏಪ್ರಿಲ್ 12ರಂದು ನಡೆಸಲಾಗುತ್ತಿದ್ದ ನಾಗರೀಕ ಸೇವಾ ದಿನವನ್ನು ರಾಜ್ಯ ಸರ್ಕಾರಿ ನೌಕರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿಂದೆ ಗಣರಾಜ್ಯೋತ್ಸವ ದಿನದಂದು ವಿತರಿಸಲಾಗುತ್ತಿದ್ದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಏಪ್ರಿಲ್ 21ರಂದು ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತಿದೆ ಎಂದವರು ನುಡಿದರು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಎದುರಿಸುತ್ತಿರುವ ಸವಾಲು, ಒತ್ತಡಗಳು, ಅದರ ಪರಿಹಾರೋಪಾಯಗಳು, ಸಾಮಾಜಿಕ ಹಾಗೂ ಕೌಟುಂಬಿಕ ನಿರ್ವಹಣೆಗೆ ಮಾರ್ಗದರ್ಶನ ಕುರಿತು ಆಹ್ವಾನಿತ ತಜ್ಞರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದ್ದು, ಅಂದು ಎಲ್ಲಾ ಶ್ರೇಣಿಯ ಅಧಿಕಾರಿ-ನೌಕರರು ಒಂದೆಡೆ ಕಲೆತು ವಿಷಯ ವಿನಿಮಯ ಮಾಡಿಕೊಳ್ಳಲು ವೇದಿಕೆ ಕಲ್ಪಿಸಿದಂತಾಗಲಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಅಪರೂಪದ ಕಾರ್ಯಕ್ರಮ ಆಯೋಜಿಸಿದ ರಾಜ್ಯ ನಮ್ಮದಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರಶಸ್ತಿಗೆ ಎಲ್ಲಾ ವೃಂದಗಳ ಕಾಯಂ ಸರ್ಕಾರಿ ನೌಕರರ ಉತ್ತಮ ಸೇವೆ ಪರಿಗಣಿಸಲಾಗುವುದು. ಅಲ್ಲದೆ, ನಾಗರೀಕರಿಗೆ ಗುಣಮಟ್ಟದ ಸೇವೆ ನೀಡಿರುವುದು, ನಾಗರೀಕ ಸ್ನೇಹಿ, ಭ್ರಷ್ಟಾಚಾರ ರಹಿತ ವಾತಾವರಣ ನಿರ್ಮಾಣ, ಮುಂದಾಳತ್ವ, ಚಲನಶೀಲಗಳ ರಚನೆ, ನಾಗರೀಕರ ಅನುಕೂಲಕ್ಕಾಗಿ ವಿನೂತನ ಪದ್ಧತಿ ಅಳವಡಿಕೆ, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆ, ಕಚೇರಿ ವ್ಯವಸ್ಥೆ, ಇಲಾಖೆ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಮತ್ತಿತರ ಪ್ರಮುಖ ಅಂಶಗಳನ್ನು ಸರ್ವೋತ್ತಮ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ಎಂದರು.
ಸರ್ಕಾರದ ಮಾರ್ಗಸೂಚಿಯಂತೆ ಒಳಾಡಳಿತ ಇಲಾಖೆ, ಅರಣ್ಯ, ಪರಿಸರ, ಜೀವಶಾಸ್ತ್ರ ಇಲಾಖೆಯ ಅಧಿಕಾರಿ, ಜೀವಶಾಸ್ತ್ರ ಸಿಬ್ಬಂದಿ, ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿ ಹೊರತುಪಡಿಸಿ ಉಳಿದ ಸರ್ಕಾರಿ ನೌಕರರನ್ನು ಈ ಪ್ರಶಸ್ತಿಗೆ ಪರಿಗಣಿಸಿರುವುದಾಗಿ ತಿಳಿಸಿದರು.
2020-21ನೇ ಸಾಲಿನ ಪ್ರಶಸ್ತಿ ಪುರಸ್ಕೃತರು :
ಡಾ|| ಚಂದ್ರಪ್ಪ ಎಂ.ಜಿ. – ಆರೋಗ್ಯ ಇಲಾಖೆ, ಡಾ|| ಇರ್ಫಾನ್ ಅಹ್ಮದ್ ಎ.ಎಸ್. — ಆರೋಗ್ಯ ಇಲಾಖೆ, ಮಧುಕುಮಾರ್ ಎಂ.ಜೆ. – ಆರೋಗ್ಯ ಇಲಾಖೆ, ಶ್ರೀಮತಿ ಲತಾ — ಆರೋಗ್ಯ ಇಲಾಖೆ, ಡಾ|| ಅಶೋಕ ಎಂ.ವಿ. — ಆರೋಗ್ಯ ಇಲಾಖೆ, ಶ್ರೀಮತಿ ರಾಧಮ್ಮ — ಆರೋಗ್ಯ ಇಲಾಖೆ, ಶ್ರೀಮತಿ ಕಾಂತಮ್ಮ ಟಿ.ವಿ. — ಕಂದಾಯ ಇಲಾಖೆ, ಶ್ರೀಮತಿ ಪುಷ್ಪಲತಾ _ ಕಂದಾಯ ಇಲಾಖೆ, ಶ್ರೀನಿವಾಸ್ — ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಹಾಗೂ ಶ್ರೀಮತಿ ನೇತ್ರಮ್ಮ ಎಂ. – ಭೂಮಾಪನ ಇಲಾಖೆ.
2021-22ನೇ ಸಾಲಿನ ಪ್ರಶಸ್ತಿ ಪುರಸ್ಕೃತರು :
ಬಸವರಾಜ ಡಿ.ಎಂ. — ಕೃಷಿ ಇಲಾಖೆ, ನಾಗರಾಜ ಪಿ. – ಶಿಕ್ಷಣ ಇಲಾಖೆ, ಶ್ರೀಮತಿ ಕೆ.ಎನ್. — ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹೆಚ್.ಜಿ.ಕೃಷ್ಣಪ್ರಸಾದ್ — ಕರ್ನಾಟಕ ನೀರಾವರಿ ನಿಗಮ, ಯಶವಂತ್ ಎನ್. — ಕಂದಾಯ ಇಲಾಖೆ, ಶಿವಕುಮಾರ್ ಕೆ. — ಜಿಲ್ಲಾ ಪಂಚಾಯತ್, ಹರ್ಷ ಎಂ.ಹೆಚ್. — ಕಂದಾಯ ಇಲಾಖೆ, ಶ್ರೀಮತಿ ಜಯಂತಿ ಎಂ.ಟಿ. — ಗ್ರಾಮೀಣಾಭಿವೃದ್ಧಿ ಇಲಾಖೆ, ಶ್ರೀಮತಿ ಕೋಕಿಲ – ಆರೋಗ್ಯ ಇಲಾಖೆ ಹಾಗೂ ಸತೀಶ್ ಎನ್. – ಸಮಾಜ ಕಲ್ಯಾಣ ಇಲಾಖೆ
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ಆರ್.ಮೋಹನ್ಕುಮಾರ್, ಕಾರ್ಯದರ್ಶಿ ಕೃಷ್ಣಮೂರ್ತಿ, ಅರುಣ್, ದಿನೇಶ್, ಲಕ್ಷ್ಮಣ್, ಸತೀಶ್ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.