ಕೊರೊನಾ ವೈರಸ್ ಹೋಗಿಲ್ಲ. ಅದು ತನ್ನ ರೂಪ ಬದಲಾಯಿಸುತ್ತಾ ಮತ್ತೆ ಮರುಕಳಿಸುತ್ತಿದೆ. ಆದ್ದರಿಂದ, ಜನರು ಸಾಂಕ್ರಾಮಿಕ ರೋಗದ ವಿರುದ್ಧದ ತಮ್ಮ ಹೋರಾಟವನ್ನು ಕೈಬಿಡದೇ ಮುಂದುವರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಹೇಳಿದ್ದಾರೆ.
ಕೋವಿಡ್ ಎನ್ನುವ ಬಹುರೂಪಿ ಯಾವಾಗ ತನ್ನ ರೂಪ ಬದಲಿಸಿ, ಮತ್ತೆ ಮರುಕಳಿಸುವುದೋ ಎಂಬುದು ಯಾರಿಗೂ ತಿಳಿಯದು ಎಂದ ಮೋದಿ, ಸಾರ್ವಜನಿಕರ ಬೆಂಬಲದಿಂದಾಗಿ ಕೊರೋನಾ ಹರಡುವಿಕೆಯನ್ನು ನಿಯಂತ್ರಿಸಲು ಸುಮಾರು 185 ಕೋಟಿ ಡೋಸ್ ಲಸಿಕೆಗಳನ್ನು ನೀಡುವುದು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಗುಜರಾತ್ನ ಜುನಾಗಢ್ ಜಿಲ್ಲೆಯ ವಂಥಲಿಯಲ್ಲಿ ಮಾ ಉಮಿಯಾ ಧಾಮ್ನ ಮಹಾಪಾಟೋತ್ಸವ ಕಾರ್ಯಕ್ರಮವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಮೋದಿ ಅವರು, ರಾಸಾಯನಿಕ ಗೊಬ್ಬರಗಳ ಹಾವಳಿಯಿಂದ ಭೂಮಿ ತಾಯಿಯನ್ನು ರಕ್ಷಿಸುವ ಉದ್ದೇಶದಿಂದ ನೈಸರ್ಗಿಕ ಕೃಷಿಯತ್ತ ಮುಖ ಮಾಡುವಂತೆ ಮಾ ಉಮಿಯಾ ಭಕ್ತರನ್ನು ಒತ್ತಾಯಿಸಿದರು.
ಭಾರತದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಲು ಆಯೋಜಿಸಲಾಗುತ್ತಿರುವ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಪ್ರತಿಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ರಚಿಸುವ ಪ್ರತಿಜ್ಞೆಯನ್ನು ಕೈಗೊಳ್ಳೋಣ. ಪ್ರತಿವರ್ಷ ಮಳೆಗಾಲದ ಮೊದಲು ಕೆರೆಗಳ ಹೂಳುಗಳನ್ನು ಎತ್ತಿ, ನೀರಿನ ನಾಲೆಗಳನ್ನು ಸ್ವಚ್ಛಗೊಳಿಸುವ ಮೂಲಕ ಜಲಸಂರಕ್ಷಣೆಯ ಕಾರ್ಯವನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಮಾ ಉಮಿಯಾ ಅವರ ಭಕ್ತರು ಗ್ರಾಮೀಣ ಮಟ್ಟದಲ್ಲಿ ಅಪೌಷ್ಟಿಕ ಮಕ್ಕಳು ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ತಾಯಂದಿರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಯೋಜನೆಗಳನ್ನು ಕೈಗೆತ್ತಿಗೊಳ್ಳಬೇಕು. ದೇವಸ್ಥಾನದ ನಿರ್ವಹಣೆ ಮಾಡುವ ಮಾ ಉಮಿಯಾ ಟ್ರಸ್ಟ್ ,ಗ್ರಾಮಮಟ್ಟದಲ್ಲಿ ಮಕ್ಕಳ ಆರೋಗ್ಯ ವೃದ್ಧಿಸುವ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ಹೇಳಿದ್ದಾರೆ.