ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆಯುವ ಮುನ್ನವೇ, ಎಂಕ್ಯೂಎಂ-ಪಿಹಾಗೂ ಬಿಎಪಿ ಪಕ್ಷಗಳು ಆಡಳಿತ ರೂಢ ಮೈತ್ರಿಕೂಟದಿಂದ ಹೊರನಡೆದಿವೆ.
ಹೀಗಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭವಿಷ್ಯ ಮತ್ತಷ್ಟು ಅತಂತ್ರವಾಗಿದೆ.
ಈ ನಡುವೆ, ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದಾಗಿ ಪ್ರಕಟಿಸಿದ್ದ ಇಮ್ರಾನ್ ಖಾನ್, ದಿಢೀರನೇ ಈ ಕಾರ್ಯಕ್ರಮವನ್ನು ರದ್ದು ಪಡಿಸಿದರು.
ಅವರು ಸೇನೆ ಮತ್ತು ಗುಪ್ತಚರ ಇಲಾಖೆ ಮುಖ್ಯಸ್ಥರೊಂದಿಗೆ ಚರ್ಚೆ, ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯನ್ನೂ ನಡೆಸಿದರು.
ಈ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ಸಂಪುಟ ಸಭೆಯನ್ನು ನಡೆಸಿದರು. ‘ಅವರ ಪದಚ್ಯುತಿಗೆ ವಿದೇಶಗಳು ಪಿತೂರಿ ನಡೆಸಿವೆ’ ಎಂಬುದಕ್ಕೆ ಸಂಬಂಧಿಸಿದ್ದು ಎನ್ನಲಾದ ಪತ್ರದಲ್ಲಿನ ಮಾಹಿತಿಯನ್ನು ಅವರು ಸಂಪುಟದ ಸಹೋದ್ಯೋಗಿಗಳಿಗೆ ವಿವರಿಸಿದರು.
ಹಿರಿಯ ಪತ್ರಕರ್ತರೊಂದಿಗೆ ನಂತರ ನಡೆಸಿದ ಸಭೆಯಲ್ಲಿಯೂ ಈ ಮಾಹಿತಿ ಹಂಚಿಕೊಂಡರು ಎಂದು ಮೂಲಗಳು ಹೇಳಿವೆ.
ಆತಿಥೇಯ ರಾಷ್ಟ್ರವೊಂದರ ಅಧಿಕಾರಿಗಳೊಂದಿಗೆ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳು ನಡೆಸಿದ್ದ ಸಭೆಯಲ್ಲಿ ಚರ್ಚೆಯಾದ ವಿಷಯಗಳು ‘ಪತ್ರ’ದಲ್ಲಿವೆ ಎಂದು ‘ಎಆರ್ವೈ ನ್ಯೂಸ್’ ಚಾನೆಲ್ ವರದಿ ಮಾಡಿದೆ.
ಉಕ್ರೇನ್ಗೆ ಸಂಬಂಧಿಸಿ ಪಾಕಿಸ್ತಾನದ ನಿಲುವು ಹಾಗೂ ರಷ್ಯಾದೊಂದಿಗಿನ ಮೈತ್ರಿ ಬಗ್ಗೆ ಆತಿಥೇಯ ರಾಷ್ಟ್ರ ಅಸಮಾಧಾನ ಹೊರಹಾಕಿದೆ. ನಾನು ಅಧಿಕಾರದಲ್ಲಿ ಮುಂದುವರಿದರೆ ಪಾಕಿಸ್ತಾನ ಮತ್ತು ಆ ರಾಷ್ಟ್ರದ ನಡುವಿನ ಸಂಬಂಧ ಹದಗೆಡಲಿದೆ ಎಂಬುದು ಪತ್ರದಲ್ಲಿತ್ತು ಎಂದು ಇಮ್ರಾನ್ಖಾನ್ ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಸರ್ಕಾರ ಬಹುಮತ ಕಳೆದುಕೊಂಡಿದೆ. ಹಾಗಾಗಿ, ಅವಿಶ್ವಾಸ ನಿರ್ಣಯದ ಮೇಲೆ ಮತದಾನ ನಡೆಯುವ ಮೊದಲೇ ಇಮ್ರಾನ್ಖಾನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದುವಿರೋಧ ಪಕ್ಷಗಳು ಆಗ್ರಹಿಸಿವೆ ಎಂದು ತಿಳಿದುಬಂದಿದೆ.
ಪಕ್ಷವು ಪಾಕಿಸ್ತಾನ ಪೀಪಲ್ ಪಾರ್ಟಿ (ಪಿಪಿಪಿ) ಹಾಗೂ ಪಾಕಿಸ್ತಾನಮುಸ್ಲಿಂ ಲೀಗ್ (ಪಿಎಂಎಲ್-ಎನ್) ನೇತೃತ್ವದ ವಿರೋಧ ಪಕ್ಷದೊಂದಿಗೆ ಕೈಜೋಡಿಸಿರುವುದಾಗಿ ಹೇಳಿರುವ ಎಂಕ್ಯೂಎಂ-ಪಿ, ತನ್ನ ಏಳು ಜನ ಸಂಸದರು ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದಿದೆ. ಬಲೂಚಿಸ್ತಾನ ಅವಾಮಿ ಪಾರ್ಟಿ (ಬಿಎಪಿ) ಐವರು ಸದಸ್ಯರನ್ನು ಹೊಂದಿದೆ.
ಆಡಳಿತಾರೂಢ ಪಿಟಿಐನ 10ಕ್ಕೂಹೆಚ್ಚು ಸಂಸದರು ಕೂಡ ಅಡ್ಡ ಮತದಾನ ಮಾಡುವ ಸುಳಿವು ನೀಡಿದ್ದಾರೆ.
ಹಾಗಾಗಿ, ಈ ಸಂಸದರು ಮತದಾನದಿಂದ ದೂರ ಉಳಿಯುವಂತೆನೋಡಿಕೊಳ್ಳಲು ಪಿಟಿಐಮುಖಂಡರಿಂದ ಕಸರತ್ತು ಮುಂದು ವರಿದಿದೆ.
ಇಮ್ರಾನ್ ಖಾನ್ ಅವರು ಸೇನೆಯ ಬೆಂಬಲವನ್ನು ಕಳೆದುಕೊಂಡಿದ್ದು, ಅವರು ಅಧಿಕಾರದಲ್ಲಿ ಮುಂದುವರಿಯುವುದು ಕಷ್ಟ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ