ಪಿಯುಸಿ ದ್ವಿತೀಯ ವರ್ಷದ ಉತ್ತರ ಪತ್ರಿಕೆಗಳ ಅಸಮರ್ಪಕ ಮೌಲ್ಯಮಾಪನದಿಂದ ಕಳೆದ 3 ವರ್ಷಗಳಲ್ಲಿ 2,777 ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಮೌಲ್ಯಮಾಪನ ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎನ್. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಸಮರ್ಪಕ ಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದ್ದು ನಿಜ. ಇಲಾಖೆ ದಂಡ ವಸೂಲಿ ಮಾಡಿಲ್ಲ.ಇದು ಯಾಕೆ ಎಂಬುದು ಗೊತ್ತಿಲ್ಲ. ಈಗಿನದ್ದು ಪೈಪೋಟಿಯ ಕಾಲ.
ಪಾಯಿಂಟ್ಗಳಲ್ಲಿ ಅಂಕಗಳನ್ನು ಅಳೆಯಲಾಗುತ್ತದೆ. ಹೀಗಿರುವಾಗ 6ಕ್ಕಿಂತ ಕಡಿಮೆ ಅಥವಾ 6ಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸದ ಬಗ್ಗೆಯೂ ಪರಿಶೀಲಿಸಬೇಕಾಗಿದೆ ಎಂದರು.
2019-20ನೇ ಸಾಲಿನಲ್ಲಿ ಪಿಯುಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಅಸಮರ್ಪಕ ಮೌಲ್ಯಮಾಪನ ಮಾಡಿದ ನಾಲ್ವರು ಮೌಲ್ಯಮಾಪಕರಿಂದ ಕೇವಲ 400 ರು.ದಂಡ ವಸೂಲಿ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಕೋವಿಡ್-19 ಕಾರಣಕ್ಕೆ ವಾರ್ಷಿಕ ಪರೀಕ್ಷೆ ನಡೆದಿಲ್ಲ.
ಆದರೆ, ಸರ್ಕಾರಿ ಆದೇಶದ ಅನ್ವಯ ಫಲಿತಾಂಶ ಒಪ್ಪದಿರುವ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗಿದೆ. ಈ ಸಾಲಿನಲ್ಲಿಯೂ ಅಸಮರ್ಪಕ ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರಿಂದ ಯಾವುದೇ ದಂಡ ವಸೂಲಿ ಮಾಡಿಲ್ಲ ಎಂದು ವಿವರಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಪಿಯುಸಿ ಪರೀಕ್ಷೆಯ ಅಸಮರ್ಪಕ ಮೌಲ್ಯಮಾಪನದಿಂದ ಒಟ್ಟು 2,777 ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿರುವ ಪ್ರತಿ ನೀಡಿ ಮರು ಎಣಿಕೆ ಮತ್ತು ಮರುಮೌಲ್ಯಮಾಪನದ ಮೂಲಕ ಶೇ 6 ಅಥವಾ 6ಕ್ಕಿಂತ ಹೆಚ್ಚು ಅಂಕಗಳು ವ್ಯತ್ಯಾಸವಾಗಿದ್ದರೆ ಪಾವತಿಸಿದ ಹಣವನ್ನು ವಾಪಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅಸಮರ್ಪಕ ಮೌಲ್ಯಮಾಪನ ನಡೆಸುವವರ ವಿರುದ್ಧ ಯಾವ ರೀತಿ ಕ್ರಮಕೈಗೊಳ್ಳಬೇಕು ಎನ್ನುವ ಬಗ್ಗೆ ಪರಿಷತ್ ಸದಸ್ಯರ ಜತೆ ಚರ್ಚಿಸಲಾಗುವುದು. 2019ರಲ್ಲಿ 1008 ವಿದ್ಯಾರ್ಥಿಗಳ ಉತ್ತರಪತ್ರಿಕೆಗಳಲ್ಲಿ ಶೇ6ಕ್ಕಿಂತ ಹೆಚ್ಚು ಅಂಕಗಳು ವ್ಯತ್ಯಾಸವಾಗಿವೆ’ ಎಂದು ತಿಳಿಸಿದ್ದಾರೆ.