ಕನ್ನಡಿಗರಿಗೆ ತಾಯಿನಾಡಿನ ಬಗ್ಗೆ ಪ್ರೀತಿ ಬರಬೇಕು. ಕೇವಲ ನವೆಂಬರ್ ಕನ್ನಡಿಗರಾಗದ್ದೇ ವರ್ಷವಿಡಿ ಎಲ್ಲಿದ್ದರೂ ನಾವು ಕನ್ನಡಿಗರಾಗಿರಬೇಕು ಎಂಬ ಭಾಷಾಭಿಮಾನ ಒಡಮೂಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಜಿ.ಎಸ್. ಸುಶಿಲಾದೇವಿ ಆರ್. ರಾವ್ ಅವರು ತಿಳಿಸಿದ್ದಾರೆ.
ದಾವಣಗೆರೆಯ ಎಲೆ ಬೇತೂರಿನಲ್ಲಿ ಇರುವ ಮಾಗನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಹನ್ನೊಂದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಎಷ್ಟು ಭಾಷೆಯನ್ನಾದರೂ ಕಲಿಯಬಲ್ಲ ಅದ್ಭುತಶಕ್ತಿ ಕನ್ನಡಿಗರಿಗೆ ಇದೆ. ಪರಭಾಷಿಕರಿಗೆ ಅದರ ಭಾಷೆಯ ಮೇಲಿರುವ ಪ್ರೇಮದಂತೆ ಕನ್ನಡಿಗರಿಗೂ ಕನ್ನಡದ ಮೇಲೆ ಪ್ರೀತಿ ಹುಟ್ಟಬೇಕು. ನಾವೆಲ್ಲಿದ್ದರೂ ಕನ್ನಡಿಗರ ಎಂಬುದನ್ನು ಮರೆಯಬಾರದು. ಬಂದವರು ನಮ್ಮೊಡನೆ ಕನ್ನಡದಲ್ಲಿ ವ್ಯವಹರಿಸಬೇಕು. ನಮ್ಮ ಮನೆಗೆ ಬಂದ ಅತಿಥಿ ಮನೆಯ ಯಜಮಾನನಾಗಬಾರದು ಎಂದರು.
ಮುಂದಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚೆನ್ನಗಿರಿಯಲ್ಲಿ ನಡೆಸಲು ಚರ್ಚೆ ನಡೆಸಲಾಗುವುದು. ಹಾಗೂ ವಿಶ್ವಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ನಡೆಸಲು ಸಂಸದರು, ಶಾಸಕರು ನಿಯೋಗ ತೆರಳಿ ಸಿಎಂ ಬೊಮ್ಮಾಯಿ ಅವರಿಗೆ ಒತ್ತಡ ಹಾಕಲಾಗುತ್ತದೆ ಎಂದು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಸಂಸ್ಕೃತಿ ಚಿಂತಕ, ಸಾಹಿತಿ ಕಾಳೇಗೌಡ ನಾಗವಾರ , ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು