ತೀರ್ಥಹಳ್ಳಿ ತಾಲೂಕು ಭಾರತಿಪುರ ಬಳಿಯ ಅಪಾಯಕಾರಿ ತಿರುವಿಗೆ ಚತುಷ್ಪಥ ಮೇಲ್ಸೇತುವೆ ಮತ್ತು ಮೇಗರವಳ್ಳಿ-ಆಗುಂಬೆ ದ್ವೀಪಥ ರಸ್ತೆ ಅಭಿವೃದ್ಧಿ ಯೋಜನೆಗೆ ಕೇಂದ್ರ ಭೂಸಾರಿಗೆ ಸಚಿವಾಲಯವು ಅನುಮೋದನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿ 169ಎದಲ್ಲಿ ಭಾರತೀಪುರ ಬಳಿ ಇದ್ದ ಅಪಾಯಕಾರಿ ಹಾಗೂ ಕ್ಲಿಷ್ಟಕರವಾಗಿದ್ದ ಹೇರ್ ಪಿನ್ ತಿರುವಿಗೆ ಬದಲೀ ರಸ್ತೆ ನಿರ್ಮಾಣ ಮಾಡುವಂತೆ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು.
ಸಂಸದರ ಪ್ರಯತ್ನದ ಈ ತಿರುವು ಬದಲಿಯಾಗಿ ಸುಮಾರು 1.30 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ 57 ಕೋಟಿ ರೂ.ಗೆ ಮಂಜೂರಾತಿ ನೀಡಲಾಗಿದೆ.
ಇದೇ ಸಮಯದಲ್ಲಿ ಮೇಗರವಳ್ಳಿಯಿಂದ ಆಗುಂಬೆ ನಡುವೆ 14.7 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ವಿಪಥ ರಸ್ತೆ ಅಭಿವೃದ್ಧಿಗೆ 96.20 ಕೋಟಿ ರೂ. ಮಂಜೂರಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.