ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮುಂಗಡ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಡವರ, ಮಧ್ಯಮವರ್ಗದವರ ಮತ್ತು ಯುವಕರ ಸ್ನೇಹಿ ಬಜೆಟ್ ಆಗಿದೆ ಎಂದು ವರ್ಣಿಸಿದ್ದಾರೆ.
ಬಿಜೆಪಿ ಆಯೋಜಿಸಿದ ಆತ್ಮ ನಿರ್ಭರ ಅರ್ಥವ್ಯವಸ್ಥೆ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಬಡವರು ಮತ್ತು ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಬಡವರಿಗೆ ಮನೆ, ನಲ್ಲಿ ನೀರು, ಶೌಚಾಲಯ, ಅಡುಗೆ ಅನಿಲದ ಜೊತೆಗೆ ಆಧುನಿಕ ಜಗತ್ತಿನ ಅವಶ್ಯಕತೆಯಾದ ಅಂತರ್ಜಾಲ ಸೌಲಭ್ಯ ನೀಡುವ ದಿಸೆಯಲ್ಲಿ ಬಜೆಟ್ ನೆರವಾಗಲಿದೆ ಎಂದು ಹೇಳಿದ್ದಾರೆ.
ಕೊರೋನಾ ಬಿಕ್ಕಟ್ಟಿನ ನಂತರದಲ್ಲಿ ಭಾರತವನ್ನು ಜಗತ್ತು ನೋಡುವ ದೃಷ್ಟಿಯ ಬದಲಾಗಿದೆ. ಭಾರತವು ಜಗತ್ತಿನಲ್ಲಿಯೇ ಶ್ರೇಷ್ಠ ರಾಷ್ಟ್ರವಾಗುವುದು ವಿಶ್ವದಾದ್ಯಂತ ಜನರು ಎದುರು ನೋಡುತ್ತಿದ್ದಾರೆ. ಆದ್ದರಿಂದಲೇ ಮುಂಗಡಪತ್ರದಲ್ಲಿ ಯುವಕರಿಗೆ ಉದ್ಯೋಗ ನೀಡುವುದು. ಮಧ್ಯಮವರ್ಗದವರಿಗೆ ತೆರಿಗೆ ಹೊರೆ ತಗ್ಗಿಸುವುದು. ರೈತರ ಆದಾಯ ದ್ವಿಗುಣ ಗೊಳಿಸಲು ಆದ್ಯತೆ ನೀಡಲಾಗಿದೆ. ಜೊತೆಗೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಆತ್ಮ ನಿರ್ಭರ ಭಾರತ ಕಲ್ಪನೆಯಲ್ಲಿ ಯೇ ಭಾರತ ಆಧುನಿಕ ಜಗತ್ತಿಗೆ ತೆರೆದುಕೊಳ್ಳಬೇಕಿದೆ. ಇದಕ್ಕಾಗಿಯೇ ಗ್ರಾಮಗಳಿಗೂ ಫೈಬರ್ ಮೂಲಕ 5ಜಿ ತಂತ್ರಜ್ಞಾನ ಸಂಪರ್ಕಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಕ್ರೀಡೆಗೆ ಹೆಚ್ಚಿನ ಹಣ ಮೀಸಲಿರಿಸಲಾಗಿದೆ. ಗಂಗಾ ನದಿ ತೀರದಲ್ಲಿ 2500 ಕಿ.ಮೀ. ಉದ್ದದ ನೈಸರ್ಗಿಕ ಕೃಷಿ ಕಾರಿಡಾರ್ ನಿರ್ಮಿಸಲು ಮುಂದಾಗಿದ್ದೇವೆ. ನವೋದ್ಯಮಗಳ ಸೃಷ್ಟಿಯಿಂದ ಯುವಕರಿಗೆ ಉದ್ಯೋಗ ಸಿಗುವ ಜೊತೆಗೆ ಅವರು ಉದ್ಯಮದ ಪಾಲುದಾರರಾಗಲು ನೆರವಾಗಲಿದೆ. ರೈತರನ್ನು ಬಜೆಟ್ ನ ಪ್ರಮುಖ ಭಾಗಿದಾರರನ್ನಾಗಿಸಿದೆ. ಪ್ರಸ್ತುತ ಸಾಲಿನಲ್ಲಿ ಭತ್ತ ಬೆಳೆಯುವ ರೈತರಿಗೆ 1.5 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ಸಿಗಲಿದೆ ಎಂದು ವಿವರಿಸಿದ್ದಾರೆ.