ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಣ ನೀಡಿದವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿ ಎರಡು ದಿನಗಳಲ್ಲಿ ಸಂಪೂರ್ಣ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ.
ಸೋಮಶೇಖರ್ ಬುವರ ಜೈಲಿಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ತನಿಖೆ ಕೈಗೊಂಡರು. ಈ ಮಧ್ಯೆ, ಜೈಲಿಗೆ ಪ್ರಧಾನ ಅಧೀಕ್ಷಕ ರಂಗನಾಥ್ ಅವರು ಸೋಮಶೇಖರ್ ಅವರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೆ, ಕಾರಾಗೃಹ ಎಡಿಜಿಪಿ ಅಲೋಕ್ ಮೋಹನ್ ಅವರು ಕೂಡ ಘಟನೆ ಬಗ್ಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಕೈದಿಗಳು ಗಾಂಜಾ ಮತ್ತು ಮೊಬೈಲ್ ಬಳಸಿರುವುದರ ಬಗ್ಗೆ ಸಂಬಂಧ 19 ಮಂದಿ ವಿರುದ್ಧ 12ಎಫ್ಐಆರ್ ದಾಖಲಾಗಿದೆ. ಕೃತ್ಯಕ್ಕೆ ಸಹಕರಿಸಿದ್ದರು ಎನ್ನಲಾದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಅಲ್ಲದೆ ಹಲವು ವರ್ಷಗಳಿಂದಲೂ ಇದೇ ಕೇಂದ್ರಗಳ ಕಾರ್ಯನಿರ್ವಹಿಸುತ್ತಿದ್ದ 52 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಇನ್ನು ಮುಖ್ಯ ಅಧೀಕ್ಷಕ ಹಾಗೂ ಅಧೀಕ್ಷಕ ರಂತಹ ಅಧಿಕಾರಿಗಳನ್ನು ಹೊರತುಪಡಿಸಿ ಎಲ್ಲಾ ಸಿಬ್ಬಂದಿಗಳು ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ.
ಈ ಹಿಂದೆ ಬೆಂಗಳೂರು ಸೆಂಟ್ರಲ್ ಜೈಲ್ ಅಧೀಕ್ಷಕರಾಗಿ ಅನುಭವ ಹೊಂದಿರುವ ಬೆಳಗಾವಿ ಜೈಲಿನ ಹಾಲಿ ಡಿಐಜಿ ಸೋಮಶೇಖರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.
ಆರು ಪುಟಗಳಷ್ಟು ಪ್ರಾಥಮಿಕ ವರದಿ ಸಲ್ಲಿಸಲಾಗಿದ್ದು, ಈ ವರದಿಯಲ್ಲಿ 20 ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, 2019ರಲ್ಲಿ ಜೆಸಿಬಿ ನಾರಾಯಣ ಬಿಡುಗಡೆಯಾಗಿರುವ ದಿನಾಂಕವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳಲಾಗದಿರಲು ಕೆಲ ಸಿಬ್ಬಂದಿಗಳ ಪಿತೂರಿಯೇ ಕಾರಣ ಎನ್ನಲಾಗಿದೆ ಎಂದು ತಿಳಿದುಬಂದಿದೆ.
ಪರಪ್ಪನ ಅಗ್ರಹಾರ ಜೈಲು ಹಗರಣ: ತನಿಖೆಗೆ ಸರ್ಕಾರದ ಆದೇಶ
Date: