ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿದರೂ ಸಹ ಕನ್ನಡ ಭಾಷೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನ ಹೆಚ್ಚಿಸಬೇಕು ಎಂದು ಎಲ್ಲೆಡೆ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಮೈಸೂರಿನ ಭಾಷಾ ಸಂಸ್ಥಾನಕ್ಕೆ ಯಾವುದೇ ರೀತಿಯ ಮಂಜೂರಾತಿ ನೀಡುತ್ತಿಲ್ಲ. ವರ್ಷಕ್ಕೆ ಕೇವಲ 1 ಕೋಟಿ ರೂ. ಮಾತ್ರ ಅನುದಾನ ನೀಡಲಾಗುತ್ತಿದೆ. ಕೇಂದ್ರ ನೀಡಿರುವ ಅನುದಾನದ ಹಣ ಸಿಬ್ಬಂದಿಯ ವೇತನಕ್ಕಷ್ಟೇ ಮೀಸಲಾಗಿದೆ.
“ಸಂಸತ್ತಿನಲ್ಲಿ ಎರಡು ಪಕ್ಷದ ನಾಯಕರು ಪಕ್ಷಬೇಧವನ್ನು ಮರೆತು ಕನ್ನಡ ಭಾಷೆಗಾಗಿ ಸಂಸತ್ತಿನಲ್ಲಿ ಒಕ್ಕೊರಲಿನಿಂದ ಧ್ವನಿ ಎತ್ತಬೇಕು. ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರ ದಾರಿಯನ್ನು ಉಳಿದವರು ಅನುಸರಿಸಬೇಕು. ಕನ್ನಡ ಸಂಘಟನೆಗಳು ಕೂಡ ಧ್ವನಿ ಎತ್ತಬೇಕು” ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕಾರ್ಯದರ್ಶಿಯಾಗಿದ್ದ ಕೆ. ರಾಜಕುಮಾರ್ ಆಗ್ರಹಿಸಿದ್ದಾರೆ.
“ಎಲ್ಲಾ ಶಾಸ್ತ್ರೀಯ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡುವ ಬದಲು ಕೇಂದ್ರ ಸರ್ಕಾರ ತಾರತಮ್ಯ ನೀಡುತ್ತಿದೆ” ಎಂದು ಕರ್ನಾಟಕದ ರಾಜ್ಯಸಭಾ ಸದಸ್ಯರು ಜಿ.ಸಿ. ಚಂದ್ರಶೇಖರ್ ಸಂಸತ್ತಿನಲ್ಲಿ ಕನ್ನಡ ಪರ ಧ್ವನಿ ಎತ್ತಿದ್ದಾರೆ.
“ಮೂರು ವರ್ಷಗಳ ಅಂಕಿ-ಅಂಶ ನೋಡಿದರೆ ಕೇವಲ 28 ಸಾವಿರ ಜನರು ಮಾತನಾಡುವ ಸಂಸ್ಕೃತ ಭಾಷೆಗೆ 634 ಕೋಟಿ ರೂ. ಅನುದಾನವನ್ನು ನೀಡಲಾಗಿದೆ.7 ಕೋಟಿ ಮಂದಿ ಮಾತನಾಡುವ ಕನ್ನಡಕ್ಕೆ ಸಿಕ್ಕಿರುವುದು ಕೇವಲ 7 ಕೋಟಿ ರೂ. ಎಂಬುದನ್ನು ಉಲ್ಲೇಖಿಸಿದ್ದಾರೆ. ಸಂಸ್ಕೃತಕ್ಕೆ ಇಷ್ಟು ಮೊತ್ತ ಕೊಟ್ಟಿರುವುದಕ್ಕೆ ಆಕ್ಷೇಪವಿಲ್ಲ. ಆದರೆ 32 ಕೋಟಿ ಜನರು ಮಾತನಾಡುವ ಉಳಿದ ಐದು ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಭಾಷೆಗಳಿಗೆ ಕೇವಲ 29 ಕೋಟಿ ರೂ. ಕೊಟ್ಟಿರುವುದು ಸರಿಯಲ್ಲ” ಎಂದು ರಾಜ್ಯಸಭೆಯಲ್ಲಿ ಜಿ.ಸಿ.ಚಂದ್ರಶೇಖರ್ ತಿಳಿಸಿದ್ದಾರೆ.