ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಒಂದು ಲಕ್ಷ ರೂ. ಠೇವಣಿ ಇಡಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರು ತಿಳಿಸಿದ್ದಾರೆ.
ಮೈಸೂರು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ ನೂತನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ ಅವರ ‘ಜವಾಬ್ದಾರಿ ಸ್ವೀಕಾರ’ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲಾಧ್ಯಕ್ಷರು 50 ಸಾವಿರ , ತಾಲೂಕು ಅಧ್ಯಕ್ಷ 25 ಸಾವಿರ ರೂ.ಠೇವಣಿ ಇಡುವಂತಾಗಬೇಕು. ಏಕೆಂದರೆ ಈಗಿರುವ 1 ಸಾವಿರ ಠೇವಣಿ ಹಣದಿಂದಾಗಿ ಸಾಕಷ್ಟು ಜನರು ಸ್ಪರ್ಧಿಸುತ್ತಿದ್ದು, ಮುಂದೆ ಈ ಸಂಖ್ಯೆ ಇನ್ನೂ ಹೆಚ್ಚಾದರೆ ಚುನಾವಣೆ ನಡೆಸುವುದು ಕಷ್ಟಕರವಾಗುತ್ತದೆ ಎಂದು ಚುನಾವಣಾ ಅಧಿಕಾರಿಗಳ ಸಲಹೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಕಾರ್ಯಕಾರಿ ಸಮಿತಿಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದರು.
ಪರಿಷತ್ತಿನ ಸದಸ್ಯತ್ವ ಸಂಖ್ಯೆ 1 ಕೋಟಿ ಗುರಿ ಇರುವುದರಿಂದ ಮುಂದಿನ ಬಾರಿ ಚುನಾವಣೆಯನ್ನು ಆಪ್ ಮೂಲಕ ನಡೆಸಲು ಯೋಜಿಸಲಾಗಿದೆ. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದು ಇದೇ ಕೊನೆಯದ್ದು. ಸದಸ್ಯರು ಯಾವುದೇ ಸ್ಥಳದಲ್ಲಿದ್ದರೂ ಅಲ್ಲಿಂದಲೇ ಮತ ಚಲಾಯಿಸುವ ವ್ಯವಸ್ಥೆ ಕಲ್ಪಿಸಲಾಗುವುದು. ಪರಿಷತ್ತು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು, ಹೆಚ್ಚು ಖರ್ಚಿಲ್ಲದೆ ಎಲೆಕ್ಷನ್ ನಡೆಸಬೇಕಾಗಿದೆ ಎಂದರು.
ಆಪ್ ಮೂಲಕ ಕಸಾಪ ಚುನಾವಣೆ ಅಧ್ಯಕ್ಷರ ಅನಿಸಿಕೆ
Date: