ರಾಜ್ಯದಲ್ಲಿ ಹಲವು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದೆ. ವಾತಾವರಣದಲ್ಲಿನ ಬದಲಾವಣೆಯ ಕಾರಣ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರತಿಮನೆಯಲ್ಲೂ ಶೀತ, ಜ್ವರ, ಕೆಮ್ಮು ಹೀಗೆ ಹಲವಾರು ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಇದರಿಂದ ಆಸ್ಪತ್ರೆಗಳಲ್ಲಿ ಸರದಿ ಸಾಲು ಹೆಚ್ಚಾಗುತ್ತಿದೆ.
ವಿಪರೀತ ಮಳೆ, ಚಳಿಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಯಾವುದೇ ಸಣ್ಣ ಸಮಸ್ಯೆಯೂ ದೊಡ್ಡದಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿದವರು ಬೇಗನೆ ಕಾಯಿಲೆಗೆ ಬೀಳುತ್ತಾರೆ. ಇಂಥವರು ಮಳೆಗಾಲದಲ್ಲಿ ಅರಿಶಿನ ಮಿಶ್ರಿತ ಹಾಲು, ಮೆಣಸು, ತುಳಸಿ ರಸದ ಜೊತೆ ಜೇನುತುಪ್ಪ ಶುಂಠಿ ಸೇವಿಸಿದರೆ ಉತ್ತಮ ಎಂದು ಬೆಂಗಳೂರಿನ ಆಯುರ್ವೇದದ ವೈದ್ಯರಾದ ಡಾ. ಮಂಜುನಾಥ್ ಡಿ. ನಾಯಕ್ ತಿಳಿಸಿದ್ದಾರೆ.
ಮಳೆಗಾಲದ ಸಮಯದಲ್ಲಿ ಸಾಮಾನ್ಯವಾಗಿ ಕಾಡುವ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಇವುಗಳ ಪ್ರಮಾಣ ಹೆಚ್ಚಾಗಿದೆ. ಮಳೆಗಾಲದಲ್ಲಿನ ಕಲುಷಿತ ನೀರಿನಿಂದ ನೆಗಡಿ, ಜ್ವರ, ತಲೆನೋವು, ಸೀನುವಿಕೆ ಇನ್ನು ಮುಂತಾದ ರೋಗಲಕ್ಷಣಗಳು ಕಾಣಿಸುತ್ತದೆ. ಕೆಲವರಿಗೆ ಹೆಪಟೈಟಿಸ್ ‘ಎ’ಕೂಡ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆಗೆ ಜನರಿಗೆ ವೈರಲ್ ಜ್ವರ ಯಾವುದು, ಸಾಮಾನ್ಯ ಜ್ವರ ಯಾವುದು ಎಂದು ತಿಳಿಯದೆ ಕಂಗಾಲಾಗುತ್ತಿದ್ದಾರೆ.
ಸಾಮಾನ್ಯವಾಗಿ ಶೀತ, ಜ್ವರ, ಕೆಲವೊಮ್ಮೆ ಶ್ವಾಸಕೋಶದಲ್ಲಿ ಕಫ ಕಟ್ಟಿಕೊಂಡು ನ್ಯೂಮೋನಿಯಾ ಸಮಸ್ಯೆಗೆ ತಿರುಗುತ್ತದೆ. ಹಿರಿಯರು ಮತ್ತು ಮಕ್ಕಳು ಈ ಸಮಸ್ಯೆಗಳ ಒಳಗಾಗುವ ಪ್ರಮಾಣ ಹೆಚ್ಚಾಗಿರುತ್ತದೆ. ಹೀಗಾಗಿ ಜನರು ಆತಂಕಕ್ಕೆ ಒಳಗಾ ಗಿದ್ದಾರೆ.
ಶೀತ ,ಜ್ವರ ಜನರನ್ನು ಬಾಧಿಸದೆ ಇರುವ ಹಾಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚಾಗಿ ಬಿಸಿನೀರನ್ನು ಕುಡಿಯಬೇಕು. ಹುಳಿ ಹಣ್ಣು ಸೇವನೆ ಮಾಡಬಾರದು. ಶುಂಠಿ, ಅರಿಶಿನ, ಕಾಳುಮೆಣಸು ಕಷಾಯ ಕುಡಿಯಬೇಕು. ಖನಿಜಾಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಒಳಿತು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.