ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೌನ್ಸಿಲಿಂಗ್ ಸಮಯದಲ್ಲೇ ಸಂಪೂರ್ಣ ಶುಲ್ಕ ಭರ್ತಿ ಮಾಡಿಕೊಳ್ಳುವ ಕ್ರಮಕ್ಕೆ ಮುಂದಾಗಿದೆ. ಇದರಿಂದಾಗಿ ಅನುದಾನರಹಿತ ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಸೀಟು ಹಂಚಿಕೆಯಲ್ಲಿ ನಡೆಯುತ್ತಿದ್ದಂತಹ ‘ಸೀಟ್ ಬ್ಲಾಕಿಂಗ್’ ಹಾವಳಿಗೆ ತೆರೆ ಎಳೆದಿದೆ.
ಈ ವರ್ಷದ ಶೈಕ್ಷಣಿಕ ಕೌನ್ಸೆಲಿಂಗ್ ಸಮಯದಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಸೇರಿದಂತೆ 20 ಲಕ್ಷ ರೂಪಾಯಿ ಮೊತ್ತದ ಸಂಪೂರ್ಣ ಶುಲ್ಕವನ್ನು ಆರಂಭದಲ್ಲಿ ಪಾವತಿಸಬೇಕು ಹಾಗೂ ವಿದ್ಯಾರ್ಥಿಗಳು ಪ್ರವೇಶ ಪಡೆದ ಬಗ್ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜೊತೆಗೆ ಕಾಮೆಡ್-ಕೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮನದಟ್ಟು ಮಾಡಿಕೊಳ್ಳುತ್ತಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಲ್ಲಾ ವಿದ್ಯಾರ್ಥಿಗಳು ತಮಗೆ ಸೀಟು ದೊರೆತಾಗ ಬೋಧನಾ ಶುಲ್ಕದಲ್ಲಿ 55 ಸಾವಿರ ರೂಪಾಯಿ ಮಾತ್ರ ಪಾವತಿಸುತ್ತಿದ್ದರು. ನಂತರ ಕೌನ್ಸಿಲಿಂಗ್ ನ ಎಲ್ಲಾ ಸುತ್ತುಗಳು ಮುಗಿದ ಮೇಲೆ ಸೀಟುಗಳನ್ನು ಬಿಟ್ಟು ಕೊಡುತ್ತಿದ್ದರಿಂದ ಸ್ವಾಭಾವಿಕವಾಗಿ ಸೀಟುಗಳು ಆಡಳಿತ ಮಂಡಳಿಯ ಪಾಲಾಗುತ್ತಿತ್ತು. ಅಂತಹ ಸೀಟುಗಳನ್ನು ಆಡಳಿತ ಮಂಡಳಿ ಹೆಚ್ಚಿನ ಮೊತ್ತಕ್ಕೆ ನೀಡಿ ಹಣ ಗಳಿಸುತ್ತಿದ್ದವು. ಇದರಿಂದ ಪ್ರತಿವರ್ಷ ಶೇ.15 ರಿಂದ 25 ರಷ್ಟು ಸೀಟುಗಳನ್ನು ಬ್ಲಾಕ್ ಮಾಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಈ ನಿಟ್ಟಿನಲ್ಲಿ ಪ್ರವೇಶ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥರಾಗಿದ್ದ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ.ಮನೋಹರ್ ಸಮಿತಿಯ ಸಲಹೆಯ ಮೇರೆಗೆ ಕೆಇಎ ಕ್ರಮಕ್ಕೆ ಮುಂದಾಗಿದೆ ಎಂದು ಕಾಮೆಡ್-ಕೆ ಅಧಿಕಾರಿಗಳು ತಿಳಿಸಿದ್ದಾರೆ.