ಸಂಸದರ ಪ್ರದೇಶಾಭಿವೃದ್ಧಿ ನಿಧಿ ( ಎಂಪಿಲ್ಯಾಡ್) ಯೋಜನೆಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೋವಿಡ್ ಸಂಕಷ್ಟದ ಕಾರಣ ಎಂಪಿಲ್ಯಾಡ್ ಯೋಜನೆಯನ್ನ ಕಳೆದ ವರ್ಷ ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರ 2020-21 ಮತ್ತು 2021-22 ರವರೆಗೆ ಸ್ಥಗಿತ ಗೊಳಿಸಲಾಗಿತ್ತು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಂಪುಟ ಸಭೆಯ ನಿರ್ಧಾರಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಎಂಪಿಲ್ಯಾಡ್ ಯೋಜನೆಯು 2025-26ರ ತನಕ ಮುಂದುವರಿಯಲಿದೆ. ಈ ವರ್ಷದ 2020-22 ನೇ ಸಾಲಿನ ಹಣಕಾಸು ವರ್ಷದ ಉಳಿದ ಭಾಗಕ್ಕೆ ಅನ್ವಯವಾಗುವಂತೆ ಪ್ರತಿ ಸಂಸದರಿಗೆ ಎಂಪಿಲ್ಯಾಡ್ ಮೂಲಕ ತಲಾ 5 ಕೋಟಿ ರೂಪಾಯಿ ಏಕಕಾಲದಲ್ಲಿ ಹಂಚಿಕೆಯಾಗಿದೆ ಎಂದರು. 2022-23 ರಿಂದ 2025-26ರ ತನಕ ಪ್ರತಿ ವರ್ಷ ಪ್ರತಿ ಸಂಸದರಿಗೆ ಎಂಪಿಲ್ಯಾಡ್ ಗೆ 5 ಕೋಟಿ ರೂಪಾಯಿ ಹಂಚಿಕೆ ಆಗಲಿದೆ ಹಾಗೂ ಇದನ್ನು 2.5 ಕೋಟಿ ರೂಪಾಯಿಯ ಎರಡು ಕಂತುಗಳಲ್ಲಿ ಸರ್ಕಾರ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಎಂಪಿಲ್ಯಾಡ್ ಯೋಜನೆ ಬಗ್ಗೆ ಶಿವಮೊಗ್ಗ ಜಿಲ್ಲೆಯ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರತಿಕ್ರಿಯಿಸಿದ್ದು ಕೋವಿಡ್ ಸಂಕಷ್ಟದ ಆರ್ಥಿಕ ಪರಿಸ್ಥಿತಿಯ ನಿರ್ವಹಣೆಗಾಗಿ 2020-21 ಹಾಗೂ 2021-22 ರ ಸಂಸದರ ನಿಧಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿತ್ತು ಈಗ ಪರಿಸ್ಥಿತಿ ಸುಧಾರಿಸಿದೆ. ಸರ್ಕಾರ ಸಂಸದರ ನಿಧಿಗೆ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಎಂಪಿಲ್ಯಾಡ್ ಯೋಜನೆಯ ಹಣವನ್ನು ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಎಂಪಿಲ್ಯಾಡ್ ಯೋಜನೆಯ ಬಳಕೆ ಮಾಡಿರುವುದರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಈಗಾಗಲೇ 7 ಕೋಟಿ ರೂಪಾಯಿ ಅನುದಾನ ಖರ್ಚಾಗಿದೆ ಮಾಹಿತಿ ನೀಡಿದರು. ಅಲ್ಲದೆ ಕೇಂದ್ರ ಸರ್ಕಾರ ಸಂಸದರ ನಿಧಿಗೆ 2 ಕೋಟಿ ರೂಪಾಯಿ ಬಿಡುಗಡೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.