ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗಳ ಸಕಾಲಿಕ ಪರಿಹಾರಕ್ಕೆ ಸರ್ಕಾರ ಎಲ್ಲಾ ಸಂದರ್ಭಗಳಲ್ಲಿಯೂ ಆರ್ಥಿಕ, ತಾಂತ್ರಿಕ ಹಾಗೂ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡಿ ಸಹಕರಿಸಿದ್ದು, ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಪಕ್ಕದಲ್ಲಿ ನಿರ್ಮಿಸಿರುವ ಕ್ಷಯ ರೋಗ ಪ್ರಯೋಗಾಲಯವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉದ್ಘಾಟಿಸಿದರು.
ಕೋವಿಡ್ ಸೇರಿದಂತೆ ಅನೇಕ ಸಂದಿಗ್ಧ ಸಂದರ್ಭಗಳಲ್ಲಿ ಎಲ್ಲಾ ಹಂತದ ಆರೋಗ್ಯ ಇಲಾಖೆ ಸಿಬ್ಬಂಧಿಗಳು, ವೈದ್ಯಾಧಿಕಾರಿಗಳು ಮತ್ತು ತಂತ್ರಜ್ಞರ ಸಂಘಟಿತ ಪ್ರಯತ್ನದಿಂದಾಗಿ ಉತ್ತಮ ಸೇವೆ ಒದಗಿಸಲು ಸಾಧ್ಯವಾಗಿದೆ ಎಂದರು.
ಕ್ಷಯ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರೋಗಿಯು ತಕ್ಷಣ ವೈದ್ಯರ ಮಾತನ್ನು ಒಪ್ಪಿ ಚಿಕಿತ್ಸೆಗೆ ಮುಂದಾಗುವುದು ಕಡಿಮೆ. ಆದ್ದರಿಂದ ವೈದ್ಯರು ರೋಗಿಯನ್ನು ವಿಶ್ವಾಸದಿಂದ ಉಪಚರಿಸಿ ಸೇವೆ ಒದಗಿಸಬೇಕು. ಈ ಹಂತದಲ್ಲಿ ವೈದ್ಯರಿಗೆ ತಾಳ್ಮೆ, ಸಮಾಧಾನ ಅಗತ್ಯ. ಇದರಿಂದಾಗಿ ನಿರೀಕ್ಷಿತ ಯೋಜನೆಯ ಅನುಷ್ಠಾನದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಷಯ ರೋಗ ಘಟಕದ ನೋಡಲ್ ಅಧಿಕಾರಿ ಡಾ.ಅನಿಲ್ ಅವರು ಮಾತನಾಡಿ, ದೇಶದಲ್ಲಿ ಸುಮಾರು 26 ಲಕ್ಷ ಮಂದಿ ಕ್ಷಯರೋಗ ಬಾಧಿತರಿದ್ದು, ಪ್ರತಿವರ್ಷ 4 ಲಕ್ಷ ಮಂದಿ ಮರಣ ಹೊಂದುತ್ತಿದ್ದಾರೆ. ಕೊರೋನದಂತಹ ಸಮಯದಲ್ಲಿ ರಾಜ್ಯದ 57000 ಮಂದಿಗೆ ಕ್ಷಯ ರೋಗ ನಿಯಂತ್ರಣಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದರು.
ವೈದ್ಯರ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಸಂಘಟಿತ ಪ್ರಯತ್ನದಿಂದಾಗಿ 5000 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕ್ಷಯ ರೋಗ ಇನ್ನಿಲ್ಲದಂತೆ ನಿಯಂತ್ರಿಸಬಹುದಾಗಿದೆ ಎಂದ ಅವರು, ಈ ಅವಧಿಯಲ್ಲಿ ರೋಗದ ನಿಯಂತ್ರಣಕ್ಕಾಗಿ ಹಲವು ಪ್ರಯೋಗಗಳನ್ನು ನಡೆಸಲಾಗಿದೆ. ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಪ್ರಸ್ತತ 2025ಕ್ಕೆ ಕ್ಷಯ ರೋಗ ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ಕ್ಷಯ ರೋಗ ಗುಣವಾಗ ಬಹುದಾದ ಕಾಯಿಲೆಯಾಗಿದ್ದು, ಬಾಧಿತರಿಗೆ ಸಕಾಲಿಕ ಸಮಾಲೋಚನೆ ಮೂಲಕ ರೋಗ ನಿಯಂತ್ರಣಕ್ಕೆ ಮುನ್ನಡಿ ಬರೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಡಾ.ಅನಿಲ್, ಡಾ. ಸ್ಫೂರ್ತಿಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಡಾ.ರಘುನಂದನ್ ಮುಂತಾದವರು ಉಪಸ್ಥಿತರಿದ್ದರು.
ಕ್ಷಯ ರೋಗ ತಡೆಗೆ ಕ್ರಮ
Date: