ಕುಪ್ಪಳ್ಳಿಯ ಶತಮಾನೋತ್ಸವ ಭವನದ ಹೇಮಾಂಗಣದಲ್ಲಿ ಇಂದು ಮತ್ತು ನಾಳೆ ಪರ್ಯಾಯ ಜೀವನ ಪದ್ಧತಿ ವಿಷಯವಾಗಿ ಸಮಾಜವಾದಿ ಅಧ್ಯಯನ ಶಿಬಿರ ಆಯೋಜಿಸಲಾಗಿದೆ.
ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಹೋದ್ಯೋಗ ಸಹಯೋಗದಲ್ಲಿ ಈ ಶಿಬಿರ ನೆರವೇರಲಿದೆ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ.ಜಿ. ಬಿ. ಶಿವರಾಜ್ ಉದ್ಘಾಟಿಸಿದರು. ಬೆಂಗಳೂರಿನ ಎಂ.ಚಂದ್ರಶೇಖರ ಪ್ರತಿಷ್ಠಾನದ ಎಂಸಿ ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಡಾ. ಸಂಜೀವ್ ಕುಲಕರ್ಣಿ ಆಹಾರ ಮತ್ತು ಆರೋಗ್ಯ ಪದ್ಧತಿ ಕುರಿತು ಮಾತನಾಡಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಮೇಲುಕೋಟೆಯ ಕಾರ್ಯಕರ್ತ ಸಂತೋಷ್ ಕೌಲಗಿ ಸಹಕಾರ ಮತ್ತು ಸಹಬಾಳ್ವೆ ವಿಷಯವಾಗಿ ಮಾತನಾಡಲಿದ್ದಾರೆ.
ನಾಳೆ ಮೈಸೂರಿನ ಕಲಾವಿದ ಸಚ್ಚಿದಾನಂದ ಅವರು ಚರಕ ಬಳಕೆ ಕುರಿತು ಮಾಹಿತಿ ನೀಡುವರು. ಶಿರಸಿಯ ಪರಿಸರ ಕಾರ್ಯಕರ್ತ ಕೇಶವ ಕೋರ್ಸೆ ಅವರು ಜೀವನ ಪದ್ಧತಿ ಮತ್ತು ಶಿಕ್ಷಣ ತರಬೇತಿಯ ಕುರಿತು ಮಾಹಿತಿ ನೀಡುತ್ತಾರೆ. ಪ್ರತಿ ಗೋಷ್ಠಿ ಮುಕ್ತಾಯದ ನಂತರ ಚರ್ಚೆ ಇರುತ್ತದೆ. ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಶಿಬಿರಾರ್ಥಿಗಳ ಪ್ರತಿಕ್ರಿಯೆ ಗೋಷ್ಠಿ ಹಾಗೂ ಸಮಾರೋಪ ನಡೆಯಲಿದೆ.